ದಾಳಿಗೆ ಈಡಾದ ದೇವರಾಜ್, ಜಮೀರ್, ಖರ್ಗೆ
ಬೆಂಗಳೂರು, ಜ. 7 : ಮಾಜಿ ಶಾಸಕ ಆರ್ ವಿ ದೇವರಾಜ್ ಸೇರಿದಂತೆ ನಗರದ ಪ್ರಮುಖ ರಾಜಕಾರಣಿಗಳ ಮನೆ ಮೇಲೆ ಕೇಂದ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆ ಹಠಾತ್ ದಾಳಿ ನಡೆಸಿದ್ದಾರೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯ ವ್ಯಾಪ್ತಿಯ ವಿಕ್ಟೋರಿಯಾ ಆಸ್ಪತ್ರೆ ಎದುರು ಇರುವ ದೇವರಾಜ್ ಅವರ ನಿವಾಸ ಹಾಗೂ ಶಾಂತಿ ನಗರದ ಮತಕ್ಷೇತ್ರದಿಂದ ಬಿಜೆಪಿ ಪರವಾಗಿ ಸೋತಿರುವ ಮಲ್ಲಿಕಾರ್ಜುನ ಅವರ ಬೆಂಬಲಿಗರ ಮನೆ, ಅಲ್ಲದೆ ಕೆಪಿಸಿಸಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿ ಮೇಲೆ ಐಟಿ ದಾಳಿ ನಡೆದಿದೆ.
ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಅವರ ಬೆಂಬಲಿಗರ ನಿವಾಸದ ಮೇಲೆ ದಾಳಿ ನಡೆದಿದೆ ಎನ್ನಲಾಗುತ್ತಿದೆಯಾದರೂ ಇನ್ನೂ ದೃಡಪಟ್ಟಿಲ್ಲ. ದಾಳಿ ಸಂದರ್ಭದಲ್ಲಿ ಅಪಾರ ಪ್ರಮಾಣದ ದಾಖಲೆ ಪತ್ರ ಹಾಗೂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ಇಲಾಖೆ ಮೂಲಗಳು ತಿಳಿಸಿವೆ. ದೇವರಾಜ್ ನಿವಾಸದ ಮೇಲೆ ಸಂಜೆ 5 ಗಂಟೆ ದಾಳಿ ನಡೆದಿದೆ. ಅವರ ಬೆಂಬಲಿಗರಾದ ಲೋಕಿ ಅಲಿಯಾಸ್ ಲೋಕೇಶ್ವರ ಪೂರ್ಣಿ, ನರಸಿಂಹ ಮೂರ್ತಿ. ಪ್ರಭು, ಗೋವಿಂದೇಗೌಡ ಸೇರಿದಂತೆ ಹತ್ತು ಜನರ ಮನೆ ಹಾಗೂ ಚಾಮರಾಜಪೇಟೆಯಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ರಿಯಲ್ ಎಸ್ಟೇಟ್ ದಂಧೆಗೆ ಸಂಬಂಧಿಸಿದ ದಾಖಲೆ ಪತ್ರಗಳು, ಚಿನ್ನಾಭರಣ ಹಾಗೂ ನಗದು ದೊರೆತಿದೆ. ಪ್ರಭು ಎಂಬುವವರಿಗೆ ಸೇರಿದ ಸುಮಾರು 20 ಮನೆಗಳ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರ್ ವಿ ದೇವರಾಜ್ ಸೋದರನ ಮನೆ ಮೇಲೂ ದಾಳಿ ನಡೆದಿದೆ ಎನ್ನಲಾಗುತ್ತಿದೆಯಾದರೂ ಮೂಲಗಳು ದೃಡಪಡಿಸಿಲ್ಲ. ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಅವರ ಸಹಚರ ರಮೇಶ್, ಬಸವರಾಜ್ ಎಂಬುವವರ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ. ಮೂಲಗಳು ಪ್ರಕಾರ ಶಾಸಕರ ಭವನ ಸಮೀಪದ ಹೈ ಪಾಯಿಂಟ್ ಬಳಿ ಮಲ್ಲಿಕಾರ್ಜುನ ಖರ್ಗೆ ಹೊಂದಿದ್ದ ಕಚೇರಿ ಮೇಲೆ ದಾಳಿ ನಡೆದಿದೆ.
(ಸ್ನೇಹ ಸೇತು, ವಿಜಯ ಕರ್ನಾಟಕ)












Click it and Unblock the Notifications