ಬೆಂಗಳೂರಿಗೆ ಎನ್ಎಸ್ ಜಿ ಘಟಕ ಮಂಜೂರು?

ಮುಖ್ಯಮಂತ್ರಿ ಸಭೆಯಲ್ಲಿ ಮಾತನಾಡಿದ ಕೇಂದ್ರದ ಗೃಹ ಸಚಿವ ಪಿ ಚಿದಂಬರಂ, ಉಗ್ರರನ್ನು ಮಟ್ಟಹಾಕಲು ದೇಶದ ವಿವಿಧೆಡೆ ಇನ್ನಷ್ಟು ಎನ್ ಎಸ್ ಜಿ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳುವ ಮೂಲಕ ಕರ್ನಾಟಕದ ಆಸೆಯನ್ನು ಜೀವಂತವಾಗಿರಿಸಿದ್ದಾರೆ. ಮುಖ್ಯವಾಗಿ ಪೊಲೀಸ್ ಹಾಗೂ ಗುಪ್ತಚರ ಇಲಾಖೆಯನ್ನು ಬಲಗೊಳಿಸಲು ಎಲ್ಲ ಕ್ರಮಗಳನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದು ಚಿದಂಬರಂ ಸ್ಪಷ್ಟಪಡಿಸಿದರು. ಉಗ್ರರ ಉಪಟಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನಾರ್ಹ ಕ್ರಮಗಳನ್ನು ತೆಗೆದುಕೊಳ್ಳಲು ಉದ್ದೇಶಿಸಿದೆ ಎಂದು ಅವರು ಹೇಳಿದರು.
ಮುಂಬೈ ಭಯೋತ್ಪಾದನೆಯ ನಂತರ ಕೇಂದ್ರ ಸರ್ಕಾರ ಮುಂಬೈ, ಕೊಲ್ಕತ್ತಾ, ಚೆನ್ನೈ ಹಾಗೂ ಹೈದರಾಬಾದ್ ನಲ್ಲಿ ಎನ್ಎಸ್ ಜಿ ಘಟಕಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಐಟಿ ಹಬ್ ಎನಿಸಿರುವ ಬೆಂಗಳೂರಿನಲ್ಲಿ ಎನ್ ಎಸ್ ಜಿ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ಕಾರಣಾಂತರಗಳಿಂದ ಬೆಂಗಳೂರು ಹೆಸರನ್ನು ಕೈಬಿಡಲಾಗಿತ್ತು. ಕೇಂದ್ರದ ಧೋರಣೆಗೆ ಕರ್ನಾಟಕದಲ್ಲಿ ಭಾರಿ ಟೀಕೆಗಳು ಕೇಳಿಬಂದಿದ್ದವು. ಬೆಂಗಳೂರು ನಗರ ಜಾಗತಿಕ ವಲಯದಲ್ಲಿ ಖ್ಯಾತಿಯಾಗಿದೆ. ಇಂತಹ ಪ್ರತಿಷ್ಠಿತ ನಗರಕ್ಕೆ ಎನ್ಎಸ್ ಜಿ ಸ್ಥಾಪಿಸಬೇಕು ಎಂದು ತೀವ್ರ ಒತ್ತಡ ಹೇರಲಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ಬಗ್ಗೆ ಅನೇಕ ಸಲ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ಎನ್ಎಸ್ ಜಿ ಸ್ಥಾಪಿಸಿ ಪಿಎಂಗೆ ಸಿಎಂ ಮೊರೆ












Click it and Unblock the Notifications