ಏಷ್ಯಾದ ಹೀರೊ, ಭ್ರಷ್ಟ ಅಧಿಕಾರಿ ಗೌತಮ್ ಸಾವು
ಪಾಟ್ನಾ, ಜ. 6 : ಇದು ವಿಪರ್ಯಾಸವೂ, ವಿಧಿಯಾಟವೋ ಗೊತ್ತಿಲ್ಲ. ಒಂದು ಕಾಲದಲ್ಲಿ ಟೈಮ್ಸ್ ಪತ್ರಿಕೆಯಂತಹ ಪ್ರತಿಷ್ಠಿತ ಪತ್ರಿಕೆಯಿಂದ ಅತ್ಯಂತ ಕಿರಿಯ ವಯಸ್ಸಿನಲ್ಲೇ ಎಷಿಯನ್ ಹಿರೋ ಪಟ್ಟ ಗಳಿಸಿ, ಅದೇ ವೇಗದಲ್ಲಿ ಬಿಹಾರ ಪರಿಹಾರ ನಿಧಿಯ ಅವ್ಯವಹಾರದಲ್ಲಿ ಸಿಲುಕಿ ಜೈಲು ಸೇರಿದ ಪ್ರತಿಭಾವಂತ ಅಧಿಕಾರಿ ಗೌತಮ್ ಗೋಸ್ವಾಮಿ ಇಂದು ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ತಿಂಗಳಗಳಿಂದ ಅವರು ಯಕೃತ್ತಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
ಬಿಹಾರ ಪರಿಹಾರ ನಿಧಿಯಲ್ಲಿ 18.5 ಕೋಟಿ ರುಪಾಯಿ ಅವ್ಯವಹಾರ ನಡೆಸಿದ ಆರೋಪದಲ್ಲಿ ಗೌತಮ್ ಭಾಗಿಯಾಗಿದ್ದರು. ಕೇಂದ್ರ ಲಾಲು ಪ್ರಸಾದ ಯಾದವ್ ಸಹೋದರ ಸಾದು ಯಾದವ್ ಸೇರಿ 27 ಮಂದಿ ಈ ಹಗರಣದಲ್ಲಿ ಜೈಲು ಸೇರಿದ್ದಾರೆ. 1991 ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದ ಗೌತಮ್ ಗೋಸ್ವಾಮಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ತಮ್ಮ ಕಾರ್ಯಕ್ಷಮತೆಯಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡರು.
2004ರಲ್ಲಿ ಪ್ರತಿಷ್ಠಿತ ಟೈಮ್ಸ್ ಪತ್ರಿಕೆಯಿಂದ ಏಷಿಯನ್ ವ್ಯಕ್ತಿ ಎಂಬ ಪ್ರಶಸ್ತಿಯನ್ನೂ ಗಳಿಸಿದರು. ದೇಶದ ಯುವಕರಿಗೆ ಮಾದರಿ ವ್ಯಕ್ತಿ ಅನಿಸಿದ್ದರು. ಆದರೆ, ತಿಳಿದೋ, ತಿಳಿಯದೆಯೋ ಗೌತಮ್ ಗೌಸ್ವಾಮಿ ಕೋಟ್ಯಾಂತರ ರುಪಾಯಿಗಳ ಪರಿವಾರ ಹಣದಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿಲಾಯಿತು. ಗೌತಮ್ ರಾಜಕಾರಣಿಗಳಿಗೆ ಆರೋಪ, ಪ್ರತ್ಯಾರೋಪಕ್ಕೆ ಹರಕೆ ಕುರಿಯಾದರು. ಕೊನೆಯಲ್ಲಿ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಲಾಯಿತು.
ತನಿಖೆಯಲ್ಲಿ ಗೌತಮ್ ತಪ್ಪಿತಸ್ಥ ಎಂದು ಸಾಬೀತಾಯಿತು. ಪಾಟ್ನಾ ಹೈಕೋರ್ಟ್ ನಿಂದ ಶಿಕ್ಷೆಗೊಳಗಾಗಿ ಜೈಲು ಸೇರಿದರು. ಇದು ಗೌತಮ್ ಅವರನ್ನು ತೀವ್ರ ಘಾಸಿಗೊಳಿಸಿತು. ಅಸಾಮಾನ್ಯ ಅಧಿಕಾರಿಯಾಗಿದ್ದ ಗೌತಮ್ ಒಂದೇ ಸಲ ಪಾತಾಳ ಕಂಡರು. ಅದರಿಂದ ಅವರು ಮೇಲೆಳಲು ಸಾಧ್ಯವಾಗಲಿಲ್ಲ. ಅವಮಾನ ತಾಳಲಾರದೇ ಅವರು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಸಹರಾ ಸಮೂಹಕ್ಕೆ ಸೇರಿಕೊಂಡರು. ಅಲ್ಲಿ ಕೂಡ ಅವರು ಬಹಳ ದಿನ ಉಳಿಯಲಿಲ್ಲ. ನವೆಂಬರ್ 10 2006 ರಂದು ಜೈಲಿನಿಂದ ಹೊರಬಂದಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications