ಸರ್ವ ಶಿಕ್ಷಣ ಅಭಿಯಾನಕ್ಕೆ ಹೆಚ್ಚಿನ ಅನುದಾನ
ಬೆಂಗಳೂರು, ಜ. 2 : ಪ್ರಾಥಮಿಕ ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಪಡಿಸಲು ಆರಂಭಿಸಲಾಗಿರುವ ಸರ್ವ ಶಿಕ್ಷಣ ಅಭಿಯಾನದಡಿ ನೀಡಲಾಗುತ್ತಿರುವ ಅನುದಾನವನ್ನು ಶೇ.35ರಷ್ಟು ಹೆಚ್ಚಿಸಲಾಗಿದ್ದು 960 ಕೋಟಿ ರು.ಗೆ ನಿಗದಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸರ್ವ ಶಿಕ್ಷಣ ಅಭಿಯಾನದ ಆಡಳಿತ ಮಂಡಳಿಯ ಸಭೆಯನ್ನು ಉದ್ದೇಶಿ ಮಾತನಾಡುತ್ತಿದ್ದ ಯಡಿಯೂರಪ್ಪ, ಈ ಯೋಜನೆಯ ಯಶಸ್ವಿ ಅಭಿಯಾನಕ್ಕಾಗಿ ರಾಜ್ಯ ಸರ್ಕಾರ 336 ಕೋಟಿ ರು.ಯಷ್ಟು ಹಣವನ್ನು ಕಾಯ್ದಿರಿಸಿದ್ದು, ಒಟ್ಟು 960 ಕೋಟಿ ರು.ಯಷ್ಟು ವ್ಯಯಿಸುದ್ದಿದೆ ಎಂದರು.
ಈ ಅಭಿಯಾನ ನಡೆಸುವಲ್ಲಿ ಕರ್ನಾಟಕವೇ ಮೊತ್ತಮೊದಲಿನದಾಗಿದೆ. ಯೋಜನೆಯಿಂದಾಗಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಸಾಕಷ್ಟು ವೃದ್ಧಿಯಾಗಿದೆ ಎಂದು ಅವರು ಸಂಸತ ವ್ಯಕ್ತಪಡಿಸಿದರು.
ಸರ್ವ ಶಿಕ್ಷಣ ಅಭಿಯಾನದ ಭಾಗವಾಗಿರುವ 'ನಲಿ ಕಲಿ' ಯೋಜನೆಯನ್ನು ಮೂರನೇ ಮತ್ತು ನಾಲ್ಕನೇ ಇಯತ್ತೆಯ ವಿದ್ಯಾರ್ಥಿಗಳಿಗೂ ಸಿಗುವಂತಾಗಬೇಕು ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು. ಕೇಂದ್ರ ಪ್ರಾಯೋಜಿತವನ್ನು ರಾಜ್ಯ ಯಶಸ್ವಿಯಾಗಿ ಮಾಡುತ್ತಿರುವುದರಿಂದ ಕೇಂದ್ರ ಸರ್ಕಾರ 200 ಕೋಟಿ ರು. ಹೆಚ್ಚಿನ ಅನುದಾನ ರಾಜ್ಯಕ್ಕೆ ನೀಡಿದೆ ಎಂದು ಅವರು ತಿಳಿಸಿದರು.
ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು, ವಿವಿಧ ಎನ್ ಜಿಓಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
(ಏಜೆನ್ಸೀಸ್)