ಅಡ್ವಾಣಿ ಪಿಎಂ ಮಾಡುವುದೇ ಏಕೈಕ ಗುರಿ: ಸಿಎಂ
ಕೊಪ್ಪ, ಡಿ. 29 : ಅಭಿವೃದ್ಧಿ ಕಾರ್ಯಗಳು ಸರ್ಕಾರದ ಶ್ರೀರಕ್ಷೆಯಾಗಿದೆ. ಉಪಚುನಾವಣೆಯ ಎಲ್ಲ ಎಂಟು ಕ್ಷೇತ್ರಗಳಲ್ಲಿಯೂ ಭಾರತೀಯ ಜನತಾ ಪಾರ್ಟಿ ಜಯಭೇರಿ ಭಾರಿಸಲಿದೆ ಎಂದು ಮುಖ್ಯಮಂತ್ರಿ ಡಾ ಬಿಎಸ್ ಯಡಿಯೂರಪ್ಪ ವಿಶ್ವಾಸವ್ಯಕ್ತಪಡಿಸಿದರು.
ಸೋಮವಾರ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು. ಕಳೆದ ಶನಿವಾರ ನಡೆದ ಎಂಟು ಮರುಚುನಾವಣೆಯಲ್ಲಿ ಬಿಜೆಪಿಗೆ ನಿಚ್ಚಳ ಜಯ ಸಿಗಲಿದೆ. ಇದರ ಬಗ್ಗೆ ಅನುಮಾನವೇ ಬೇಡ. ಸರ್ಕಾರ ಅನೇಕ ಜನಪರ ಕೆಲಸ ಮಾಡಿದೆ. ಜನರು ಸರ್ಕಾರದ ಕೈಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಕ್ಕೇರಿಯಿಂದ ಬೆಳಗಾವಿಗೆ ಮತಯಂತ್ರ ಹೊತ್ತು ತರುತ್ತಿದ್ದ ಬಸ್ ಪಲ್ಟಿಯಾಗಿ ದುರ್ಘಟನೆ ಸಂಭವಿಸಿದೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಪ್ರತಿಪಕ್ಷಗಳು ಮಾಡುತ್ತಿರುವ ಅಪಾದನೆಗಳಲ್ಲಿ ಯಾವುದೇ ಹುರುಳಿಲ್ಲ. ಮತ್ತೊಮ್ಮೆ ಮರುಮತದಾನ ನಡೆಸುವುದು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದರು. ಮತಯಂತ್ರ ಹೊತ್ತು ತರುತ್ತಿದ್ದ ಬಸ್ ಆಕಸ್ಮಿಕವಾಗಿ ಪಲ್ಟಿ ಹೊಡೆದು ಬಸ್ ಚಾಲಕ ಮೃತಪಟ್ಟು ಎಂಟು ಮಂದಿ ಗಾಯಗೊಂಡಿರುವ ಘಟನೆ ಶನಿವಾರ ಮಧ್ಯರಾತ್ರಿ ನಡೆದಿತ್ತು. ಇದನ್ನು ತೀವ್ರವಾಗಿ ಟೀಕಿಸಿದ್ದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ಇದು ಸರ್ಕಾರದ ಪೂರ್ವ ನಿಯೋಜಿತ ಸಂಚು ಎಂದು ಆರೋಪಿಸಿದ್ದರು. ಆದ್ದರಿಂದ ಕೂಡಲೇ ಮರುಮತದಾನಕ್ಕೆ ಆಗ್ರಹಿಸಿದ್ದರು.
ಮಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಅತೀ ಹೆಚ್ಚು ಗೆಲ್ಲಿಸಿಕೊಡುವ ಭರವಸೆ ನೀಡಿದ ಯಡಿಯೂರಪ್ಪ, ಈ ಮೂಲಕ ಬಿಜೆಪಿಯ ಸರ್ವೋಚ್ಛ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ದೇಶದ ಪ್ರಧಾನಮಂತ್ರಿ ಹುದ್ದೆಯಲ್ಲಿ ಕೂರಿಸುವುದು ಏಕೈಕ ಗುರಿಯಾಗಿದೆ ಎಂದು ಅವರು ಹೇಳಿದರು.
(ದಟ್ಸ್
ಕನ್ನಡ
ವಾರ್ತೆ)
ಹುಕ್ಕೇರಿ:
ಮರುಮತದಾನಕ್ಕೆ
ಡಿಕೇಶಿ
ಆಗ್ರಹ