8 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ಆರಂಭ
ಬೆಂಗಳೂರು, ಡಿ. 27 : ಮದ್ದೂರಿನ ಶಾಸಕ ಸಿದ್ದರಾಜು ನಿಧನ, ಜನತಾದಳ(ಜಾತ್ಯತೀತ)ದ 4 ಮತ್ತು ಕಾಂಗ್ರೆಸ್ ನ 3 ಶಾಸಕರ ರಾಜೀನಾಮೆಯಿಂದ ತೆರವಾಗಿದ್ದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮರು ಚುನಾವಣೆ ನಡೆಯುತ್ತಿದ್ದು ಮತದಾನ ಇಂದು ಬೆಳಿಗ್ಗೆಯಿಂದ ಶಾಂತರೀತಿಯಲ್ಲಿ ಜರುಗುತ್ತಿದೆ.
ಈ ಉಪಚುನಾವಣೆಗೆ ಪ್ರಮುಖ ಕಾರಣ ಆಪರೇಶನ್ ಕಮಲ. ಇದರಿಂದಾಗಿ ಈ ಚುನಾವಣೆ ಭಾರತೀಯ ಜನತಾ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ 'ಆಪರೇಶನ್ ಕಮಲ'ವನ್ನೇ ಶಸ್ತ್ರವನ್ನಾಗಿಸಿಕೊಂಡು ಯುದ್ಧಕ್ಕೆ ಇಳಿದಿವೆ.
ಅತಿ ಹೆಚ್ಚು ಅಂದರೆ, 25 ಅಭ್ಯರ್ಥಿಗಳು ಕಣದಲ್ಲಿರುವ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಬಿಜೆಪಿಯಿಂದ ಮತಯಾಚಿಸುತ್ತಿರುವ ಸಿ ಚೆನ್ನಿಗಪ್ಪ ಮತ್ತು ಜೆಡಿಎಸ್ ನ ಅನಿತಾ ಕುಮಾರಸ್ವಾಮಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಇಂದು ಬೆಳಿಗ್ಗೆ ಇಬ್ಬರೂ ಅಭ್ಯರ್ಥಿಗಳು ಮತ ಚಲಾಯಿಸಿದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ರಾಜಣ್ಣ ಕೂಡ ಮತ ಚಲಾಯಿಸಿದರು.
ಎಲ್ಲ ಕ್ಷೇತ್ರಗಳಲ್ಲಿ ಪೊಲೀಸ್ ಇಲಾಖೆ ಭಾರೀ ಬಂದೋಬಸ್ತ್ ಒದಗಿಸಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆದ ವರದಿ ಬಂದಿಲ್ಲ. ಆರಂಭದಲ್ಲಿ ಮತದಾನ ಮಂದಗತಿಯಲ್ಲಿ ಸಾಗಿದೆ. ದಿನಕಳೆದಂತೆ ಚುರುಕಾಗುವ ನಿರೀಕ್ಷೆಯಿದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಉಪಚುನಾವಣೆ : ಹಣಬಲವೋ, ಆತ್ಮಸಾಕ್ಷಿಯ ಬಲವೋ












Click it and Unblock the Notifications