20 ಲಕ್ಷ ಪಾರ್ಟಿ ಫಂಡು ಅಂದ್ರು ಗೌಡ್ರು
ಬೆಂಗಳೂರು, ಡಿ. 15 : ಬೆಳಗಾವಿ ಪೊಲೀಸರು ವಶಪಡಿಸಿಕೊಂಡಿರುವ ಹಣ ಹುಕ್ಕೇರಿ ಮತ್ತು ಅರಭಾವಿ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಚುನಾವಣೆ ವೆಚ್ಚಕ್ಕಾಗಿ ನೀಡಲಾಗಿದ್ದು, ಈ ಹಣದೊಂದಿಗೆ ಪಕ್ಷದ ಅಧ್ಯಕ್ಷರ ಅಧಿಕೃತ ಪತ್ರ ನೀಡಲಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಸ್ಪಷ್ಟೀಕರಣ ನೀಡಿದ್ದಾರೆ.
ಬೆಳಗಾವಿಯ ಎಪಿಎಂಸಿ ಪೊಲೀಸರು ವಶಪಡಿಸಿಕೊಂಡಿರುವ 20 ಲಕ್ಷ ರುಪಾಯಿ ಹಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಸರ್ಕಾರದ ಕ್ರಮಕ್ಕೆ ಆಶ್ಚರ್ಯ ಮತ್ತು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಆಯೋಗದ ನಿಯಮದ ಪ್ರಕಾರ ಪಕ್ಷದ ವತಿಯಿಂದ ಅರಭಾವಿ ಮತ್ತು ಹುಕ್ಕೇರಿಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ತಲಾ 10 ಲಕ್ಷ ರುಪಾಯಿಗಳನ್ನು ಕಳುಹಿಸಿಕೊಡಲಾಗಿತ್ತು. ಆ ವ್ಯಕ್ತಿಗಳೊಂದಿಗೆ ಹಣ ಮತ್ತು ಅಧ್ಯಕ್ಷರ ಪತ್ರವನ್ನು ಕಳಿಸಲಾಗಿತ್ತು. ಆದರೆ, ಬೆಳಗಾವಿ ಪೊಲೀಸರು ಪತ್ರ ನೋಡದೇ ಹಣವನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಈ ಹಣಕ್ಕೆ ಅಕ್ರಮ ಹಣ ಎಂದು ಹೆಸರಿಸಿದ್ದಾರೆ. ಇದು ಶುದ್ಧ ಸುಳ್ಳು ಎಂದು ಗೌಡರು ಸಮರ್ಥಿಸಿಕೊಂಡರು.
ಈ ಬಗ್ಗೆ ಬೆಳಗಾವಿ ಎಸ್ಪಿ ಅವರೊಂದಿಗೆ ಮಾತನಾಡಿದ್ದೇನೆ. ಆಯೋಗದ ನಿಯಮದಂತೆ ಪ್ರಕಾರ ತಲಾ 10 ಲಕ್ಷ ಕಳಿಸಕೊಡಲಾಗಿತ್ತು. ಆದ್ದರಿಂದ ವಶಪಡಿಸಿಕೊಂಡಿರುವ ಹಣವನ್ನು ವಾಪಸ್ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ದೇವೇಗೌಡ ಹೇಳಿದರು. ಇಂದು ಬೆಳಗ್ಗೆ ಹುಕ್ಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಸವರಾಜ ಮಠಗಾರ್ ಸಹೋದರ ಮಲ್ಲಿಕಾರ್ಜುನ ಸೇರಿ ಮೂವರು ಪೊಲೀಸರ ಬಲೆಗೆ ಬಿದ್ದಿದ್ದರು. ಬಂಧಿತರಿಂದ 20 ಲಕ್ಷ ರುಪಾಯಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)
ಬೆಳಗಾವಿ, ಜೆಡಿಎಸ್ ನ 20 ಲಕ್ಷ ವಶ, 3 ಬಂಧನ












Click it and Unblock the Notifications