ಗೃಹ ಸಚಿವ ಪಿ ಚಿದಂಬರಂ ದ್ವಿಪಾತ್ರಾಭಿನಯ
ನವದೆಹಲಿ, ಡಿ. 10 : ಈ ದೇಶಕ್ಕೆ ಹೊಸ ಅರ್ಥ ಸಚಿವರ ನೇಮಕ ಸದ್ಯಕ್ಕಿಲ್ಲ. ಸದ್ಯಕ್ಕೆ ಪಿ. ಚಿಂದಂಬರಂ ಅವರೇ ಹಣಕಾಸು ಇಲಾಖೆಯ ಜವಾಬ್ದಾರಿಗಳನ್ನು ಪರೋಕ್ಷವಾಗಿ ನಿಭಾಯಿಸಲಿದ್ದಾರೆ. ಚಿದಂಬರಂ ಅವರು ಡಾ.ಮನ್ ಮೋಹನ್ ಸಿಂಗ್ ಅವರಿಗೆ ಅರ್ಥ ಸಚಿವಾಲಯದ ಕೆಲಸ ಕಾರ್ಯ ನಿರ್ವಹಣೆಗೆ ನೆರವಾಗುತ್ತಾರೆ.
ಮುಂಬೈ ಭಯೋತ್ಪಾದನೆ ಹೊಣೆ ಹೊತ್ತು ಶಿವರಾಜ್ ಪಾಟೀಲ್ ಗೃಹಮಂತ್ರಿ ಹುದ್ದೆಗೆ ರಾಜಿನಾಮೆ ನೀಡಿದರು. ಆ ಹುದ್ದೆಗೆ ಹಣಕಾಸು ಸಚಿವರಾಗಿದ್ದ ಚಿದು ಅವರನ್ನು ತರಲಾಯಿತು. ಹಣಕಾಸು ಇಲಾಖೆಯ ಸಚಿವ ಸ್ಥಾನ ಖಾಲಿ ಬಿತ್ತು.
ಕೆಲಕಾಲದಿಂದ ಪ್ರಧಾನಿ ಸಿಂಗ್ ಅವರು ( ಸೋನಿಯಾ ಗಾಂಧೀ) ನೂತನ ಅರ್ಥ ಸಚಿವರನ್ನು ನೇಮಕ ಮಾಡುವರೆಂಬ ವರದಿಗಳು ಇದ್ದವು. ಅಹ್ಲುವಾಲಿಯಾ, ಸಿ. ರಂಗರಾಜನ್ ಅಥವಾ ಕರ್ನಾಟಕದ ಎಸ್. ಎಂ. ಕೃಷ್ಣ ಅವರುಗಳಲ್ಲಿ ಯಾರೊಬ್ಬರು ಹಣಕಾಸು ಸಚಿವರಾಗಬಹುದೆಂದು ಹೇಳಲಾಗಿತ್ತು. ಆದರೆ, ಇಂದಿನ ಒಂದು ಬೆಳವಣಿಗೆ ಆ ಎಲ್ಲ ಗಾಳಿ ಮಾತುಗಳಿಗೆ ತೆರೆ ಎಳೆಯಿತು.
ಹತ್ತು ದಿನಗಳ ಸಂಸತ್ ಅಧಿವೇಶನ ಇಂದಿನಿಂದ ಆರಂಭವಾಯಿತು. ಹಣಕಾಸು ಮಂತ್ರಾಲಯದ ಆಗುಹೋಗುಗಳ ಬಗೆಗೆ ಮಾಜಿ ಅರ್ಥಮಂತ್ರಿ ಪಿ. ಚಿದಂಬರಂ ಅವರೇ ಪ್ರಧಾನಿ ಮನ್ ಮೋಹನ್ ಅವರಿಗೆ ನೆರವು ನೀಡಲಿದ್ದಾರೆಂಬ ಪ್ರಕಟಣೆ ಸಂಸತ್ ಕಚೇರಿಯಿಂದ ಹೊರಬಿತ್ತು.
(ದಟ್ಸ್ ಕನ್ನಡ ವಾರ್ತೆ)