ಕಾಂಗ್ರೆಸ್ 'ಕೈ'ಮೇಲೆ, ಕೆಸರಿನಲ್ಲಿ ಕಮಲ
ನವದೆಹಲಿ, ಡಿ. 8 : ಮಿನಿ ಮಹಾಸಮರವೆಂದೇ ಪರಿಗಣಿಸಲಾಗಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಮೇಲುಗೈ ಸಾಧಿಸಿದ್ದು ಬಿಜೆಪಿ ಎರಡು ರಾಜ್ಯಗಳಲ್ಲಿ ಮಾತ್ರ ಜಯ ಸಾಧಿಸುವಲ್ಲಿ ಸಫಲವಾಗಿದೆ. ಕಾಂಗ್ರೆಸ್ ದೆಹಲಿಯಲ್ಲಿ ಜಯಭೇರಿ ಬಾರಿಸಿದ್ದು, ಬಿಜೆಪಿ ಭದ್ರಕೋಟೆ ರಾಜಸ್ಥಾನದಲ್ಲಿ ಬಿಜೆಪಿಯನ್ನು ಧೂಳಿಪಟ ಮಾಡಿದೆ. ದೆಹಲಿ, ಮಿಜೋರಾಂ ಮತ್ತು ರಾಜಸ್ಥಾನ ದೆಹಲಿ ಪಾಲಾಗಿವೆ. ಬಿಜೆಪಿ ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಅರಳುವಲ್ಲಿ ತೃಪ್ತಿಪಟ್ಟುಕೊಂಡಿದೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೆ ಜಯಭೇರಿ ಬಾರಿಸುವ ಮೂಲಕ ನಿಚ್ಚಳ ಬಹುಮತ ಪಡೆದಿದೆ. ಕಾಂಗ್ರೆಸ್ ಭದ್ರಕೋಟೆ ಎನಿಸಿರುವ ದೆಹಲಿ 'ಕೈ' ಯಿಂದ ಅಧಿಕಾರ ಕಸಿದುಕೊಳ್ಳಲು ಕೇಸರಿ ನಾಯಕರು ವಿಫಲರಾಗಿದ್ದಾರೆ. ಮಿಜೋರಾಂ ಆಡಳಿತ ಪಕ್ಷ ಸೋಲನುಭಿಸಿದೆ. ಮುಖ್ಯಮಂತ್ರಿಯಾಗಿದ್ದ ಲಾಲ್ಡೂಮಾ ಥಂಗಾ ಕೂಡಾ ತಮ್ಮ ಕ್ಷೇತ್ರದಲ್ಲಿ ಸೋಲಿನ ಕಹಿ ಉಂಡಿದ್ದಾರೆ. ಛತ್ತೀಸ್ ಗಢ ದಲ್ಲಿ ಬಿಜೆಪಿ ಗೆಲುವಿನ ಅಭಿಯಾನ ಮತ್ತೆ ಮುಂದುವರೆದಿದೆ.
ಮುಂಬರುವ ಲೋಕಸಭೆಗೆ ಈ ಚುನಾವಣೆ ದಿಕ್ಸೂಚಿ ಎಂದೇ ಕರೆಯಲಾಗಿತ್ತು. ಈ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಭಾರಿ ಲೆಕ್ಕಾಚಾರಗಳೊಂದಿಗೆ ಅಖಾಡಕ್ಕೆ ಇಳಿದಿದ್ದವು. ಸ್ಥಳೀಯ ಸಮಸ್ಯೆಗಳೊಂದಿಗೆ ಜಾತ್ಯಾತೀತ ವಾದವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸಿದರೆ, ಬಿಜೆಪಿ ಭಯೋತ್ಪಾದನೆ, ದೇಶೀಯ ವಾದವನ್ನು ಪಕ್ಕದಲ್ಲಿರಿಸಿಕೊಂಡು ಕಣಕ್ಕಿಳಿಯಿತು.
ದೆಹಲಿ, ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢ್ ದಲ್ಲಿ ಪಕ್ಷ ಜಯ ಸಾಧಿಸಲಿದೆ ಎಂದು ಬಿಜೆಪಿ ನಾಯಕರು ಲೆಕ್ಕಾಚಾರ ಹಾಕಿದ್ದರು. ಇದಕ್ಕೆ ಭಾರಿ ಹೋಮ್ ವರ್ಕ್ ಕೂಡಾ ಮಾಡಲಾಗಿತ್ತು. ಆದರೆ, ಅನೇಕ ದಿನಗಳಿಂದ ದೆಹಲಿಯಲ್ಲಿ ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕು ಎನ್ನುವ ಬಿಜೆಪಿ ನಾಯಕರ ಕನಸು ನುಚ್ಚುನೂರಾಗಿದೆ. ದೆಹಲಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಸಲಾಗಿದ್ದ ವಿಜಯಕುಮಾರ್ ಮಲ್ಹೋತ್ರಾ ಮುಖ ಕಳಾಹೀನವಾಗಿದೆ. ಅನೇಕ ದಿನಗಳ ಮಾಡಿದ ಶ್ರಮ ವ್ಯರ್ಥವಾಯಿತು ಎನ್ನುವುದು ಎಲ್ ಕೆ ಅಡ್ವಾಣಿ ಸೇರಿ ಎಲ್ಲ ಮುಖಂಡರ ಮುಖದಲ್ಲಿ ಎದ್ದು ಕಾಣತೊಡಗಿದೆ.
ಕಾಂಗ್ರೆಸ್ ಕೂಡಾ ಇದಕ್ಕಿಂತ ಹೊರತೇನಲ್ಲ. ಆದರೆ ಕಳೆದ ಬಾರಿಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆಯ ಫಲಿತಾಂಶ ಕಂಡುಬಂದಿದೆ. ರಾಜಸ್ತಾನದಲ್ಲಂತೂ ಕಾಂಗ್ರೆಸ್ ಮೈಕೊಡವಿ ಎದ್ದು ನಿಂತಿದೆ. ಆದರೆ, ರಾಜಸ್ಥಾನದ ಮುಖ್ಯಮಂತ್ರಿ ವಸುಧರಾ ರಾಜೇ ಸೋಲು ಒಪ್ಪಿಕೊಳ್ಳಲು ತಯಾರಿಲ್ಲ. ಪಕ್ಷೇತರರ ಸಹಾಯದಿಂದ ಸರ್ಕಾರ ರಚಿಸುವುದಾಗಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅವರ ಸಮರ್ಥ ನಾಯಕತ್ವ ಉತ್ತಮ ಕೆಲಸ ಮಾಡಿದೆ.
ಇನ್ನು ದೆಹಲಿ ರಾಜ್ಯವನ್ನು ಮತ್ತೆ ತನ್ನ ಬಳಿ ಉಳಿಸಿಕೊಂಡಿದೆ. ಆದರೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಆಟ ನಡೆದಿಲ್ಲ. ಹಾಗೆಯೇ ಉಮಾಭಾರತಿ ಅವರ ಭಾರತೀಯ ಜನಶಕ್ತಿ ಸಂಘ ಹೇಳಹೆಸರಿಲ್ಲದಂತಾಗಿದೆ. ಸ್ಪರ್ಧಿಸಿದ್ದ 216 ಕ್ಷೇತ್ರಗಳಲ್ಲಿಯೂ ಎಲ್ಲಿಯೂ ಪಕ್ಷ ಸ್ಪರ್ಧೆಯೊಡ್ಡಲು ಸಾಧ್ಯವಾಗಿಲ್ಲ. ಉಮಾಭಾರತಿ ಕೂಡಾ ಸೋಲನುಭವಿಸಿ ಮುಖಭಂಗಕ್ಕೆ ಈಡಾಗಿದ್ದಾರೆ.
ಛತ್ತೀಸ್ ಗಢ ದಲ್ಲಿ ಮತ್ತೆ ಕಮಲ ಅರಳಿದೆ. ಮುಖ್ಯಮಂತ್ರಿ ರಮಣ್ ಸಿಂಗ್ ಗೆಲುವಿನ ನೆಗೆ ಬೀರಿದ್ದಾರೆ. ಮಿಜೋರಾಂ ನಲ್ಲಿ ಆಡಳಿತರೂಢ ಪಕ್ಷದ ಮುಖ್ಯಮಂತ್ರಿ ಲಾಲ್ಡೂಮಾ ಥಂಗಾ ಸೋತಿರುವುದು ಭಾರಿ ಮುಖಭಂಗ ಅನುಭವಿಸುವಂತಾಗಿದೆ. ಇಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಜಯಗಳಿಸಿ ಅಧಿಕಾರ ಚುಕ್ಕಾಣಿ ಹಿಡಿಯಲು ತುದಿಗಾಲ ನಿಂತಿದೆ.
ರಾಜ್ಯಗಳು ಹಾಗೂ ಪಕ್ಷಗಳ ಬಲಾಬಲದ ವಿವರ ಹೀಗಿದೆ
* ರಾಜಸ್ತಾನ (200)
* ಕಾಂಗ್ರೆಸ್ - 96
* ಬಿಜೆಪಿ - 78
* ಇತರರು - 26
* ದೆಹಲಿ (69)
* ಕಾಂಗ್ರೆಸ್ - 42
* ಬಿಜೆಪಿ - 23
* ಇತರರು - 3
* ಮಧ್ಯಪ್ರದೇಶ (230)
* ಬಿಜೆಪಿ - 142
* ಕಾಂಗ್ರೆಸ್ - 70
* ಇತರರು - 18
* ಛತ್ತೀಸ್ ಗಢ(90)
* ಕಾಂಗ್ರೆಸ್ - 37
* ಬಿಜೆಪಿ - 51
* ಇತರರು - 2
* ಮಿಜೋರಾಂ(40)
* ಕಾಂಗ್ರೆಸ್ - 29
* ಇತರರು - 8
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications