ಹಾರುತಿರಲಿ, ಏರುತಿರಲಿ ಭಾರತದ ಬಾವುಟ

ನಾರಿಮನ್ ಹೌಸ್ ಕಾರ್ಯಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ. ಐದು ಮಂದಿ ಒತ್ತೆಯಾಳುಗಳು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಪಡೆಯ ಮುಖ್ಯಸ್ಥ ಜೆ ಕೆ ದತ್ತ ತಿಳಿಸಿದ್ದಾರೆ. ನಾರಿಮನ್ ಹೌಸ್ ನಲ್ಲಿದ್ದ ಉಗ್ರ ಸೆದೆಬಡಿಯುತ್ತಿದ್ದಂತೆಯೇ ಹೊರಗಡೆ ಜಮಾಯಿಸಿದ್ದ ಜನರು ವಿಜಯೋತ್ಸವ ಆಚರಿಸಿದರು. ಭಾರತ ಮಾತಾ ಕೀ ಜೈ. ಗಣಪತಿ ಬಪ್ಪ ಮೊರಯಾ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.
ಇಂದು ಬೆಳಗ್ಗೆ ಹೆಲಿಕ್ಯಾಪ್ಟರ್ ಮೂಲಕ ನಾರಿಮನ್ ಹೌಸ್ ನ್ನು ಸುತ್ತುವರೆದ ರಾಷ್ಟ್ರೀಯ ಭದ್ರತಾ ಪಡೆ ಉಗ್ರರೊಂದಿಗೆ ಕಾರ್ಯಾಚರಣೆಗೆ ಇಳಿಯಿತು. ನಾರಿಮನ್ ಕಟ್ಟಡದ ಸುತ್ತ ಭಾರಿ ಭದ್ರತೆಯನ್ನು ನಿಯೋಜಿಸಿ ಉಗ್ರರ ಮೇಲೆ ದಾಳಿ ನಡೆಸಿದ ಎನ್ ಎಸ್ ಜಿ ಯೋಧರಿಗೆ ಪ್ರತಿಯಾಗಿ ಉಗ್ರರು ಗುಂಡಿನ ಮಳೆಯನ್ನೆಗೆರೆದರು. ಉಗ್ರರು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ನಾರಿಮನ್ ಕಟ್ಟದ ಹೊರಭಾಗ ಸಂಪೂರ್ಣವಾದ ಜಖಂಗೊಂಡಿತು. ಅಂತಿಮ ಭದ್ರತಾ ಸಿಬ್ಬಂದಿ ಉಗ್ರರನ್ನು ಹತ್ಯೆಗೈದು ನಾರಿಮನ್ ಕಟ್ಟಡವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು.
ಇಂದು ಮಧ್ಯಾಹ್ನ ಮೂರುವರೆಗೆ ಒಬೆರಾಯ್ ಹೋಟೆಲ್ ನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಉಗ್ರರ ಒತ್ತೆಯಾಳು ಆಗಿದ್ದ 148 ಮಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿತ್ತು. ಮುಂಬೈ ಘಟನೆಯಲ್ಲಿ ಪಾಕಿಸ್ತಾನದ ಮೂಲದ ವ್ಯಕ್ತಿಗಳ ಕೈವಾಡವಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದು ಭಾರತದ ವಿದೇಶಾಂದ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಂಬೈ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಒಂದು ಕೋಟಿ ರುಪಾಯಿಗಳನ್ನು ಘೋಷಿಸಿದ್ದಾರೆ. ವಿಶ್ವದ ನಂಬರ್ ಒನ್ ಪೊಲೀಸ್ ಪಡೆ ಎಂದೇ ಖ್ಯಾತಿ ಪಡೆದಿರುವ ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸ್ ಇಂದು ಮುಂಬೈಗೆ ಆಗಮಿಸಿದ್ದಾರೆ. ಜತೆಗೆ ಅಮೆರಿಕದಿಂದ (ಎಫ್ ಬಿಐ) ಪೊಲೀಸ್ ಬಂದಿರುವ ವರದಿಗಳು ಬಂದಿವೆ.
ಭಯೋತ್ಪಾದನೆ ಮತ್ತು ಅದಕ್ಕೆ ಕಾರಣರಾದ ಹೊರಗಿನ ಶತೃಗಳು ಮತ್ತು ಒಳಗಿನ ಶತೃಗಳಿಗೆ ದಿಕ್ಕಾರ ಹೇಳುತ್ತಾ ಭಾರತ ದೇಶದ ಪ್ರಜೆಗಳು ನವಭಾರತ ನಿರ್ಮಾಣಕ್ಕಾಗಿ ಹೊಸ ಸಂಕಲ್ಪ ಸ್ವೀಕರಿಸುವರೆಂಬ ಆಶಾಭಾವನೆಯನ್ನು ಅನೇಕ ದೇಶ ಪ್ರಮಿಗಳು ವ್ಯಕ್ತಪಡಿಸಿದ್ದಾರೆ. ಅವರ ಆಕಾಂಕ್ಷಿಗಳು ಸಾಕಾರವಾಗಲಿ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications