ಮುಂಬೈ: ಇದುವರೆಗೂ 16 ಪೊಲೀಸರು ಬಲಿ

ಹೇಮಂತ್ ಕರ್ಕರೆ (1952-26 ನವೆಂಬರ್)
ಮಾಲೆಗಾಂವ್ ಸ್ಫೋಟ ಪ್ರಕರಣವನ್ನು ಬಯಗೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ, ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಬುಧವಾರ ರಾತ್ರಿ ತಾಜ್ ಹೋಟೆಲ್ ಬಳಿ ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಅವರ ಎದೆಗೆ ಮೂರು ಗುಂಡುಗಳು ಹೊಕ್ಕಿದ್ದರಿಂದ ಸ್ಥಳದಲ್ಲಿಯೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಹೇಮಂತ್ ಕರ್ಕರೆ ನಾಗಪುರದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿ 1982ರಲ್ಲಿ ಭಾರತೀಯ ಪೊಲೀಸ್ ಸೇವೆಗೆ ಸೇರ್ಪಡೆಯಾದರು.
ಮಹಾರಾಷ್ಟ್ರದ ಚಂದಾರಪುರದಲ್ಲಿ ಹೆಚ್ಚಾಗಿದ್ದ ನಕ್ಸಲೀಯ ಹಾವಳಿಗೆ ತಮ್ಮ ಚಾಣಕ್ಷತನದಿಂದ ಕಡಿವಾಣ ಹಾಕಿದ್ದ ಕರ್ಕರೆ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು. ದಕ್ಷ ಅಧಿಕಾರಿಯಾಗಿದ್ದ ಅವರು ಅನೇಕ ಇಲಾಖೆಯಲ್ಲಿ ಉತ್ತಮ ಅಧಿಕಾರಿ ಎಂಬ ವಿಶೇಷ ಸ್ಥಾನವನ್ನು ಹೊಂದಿದ್ದರು. ಇತ್ತೀಚೆಗೆ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥರಾಗಿದ್ದ ಅವರು ಮಾಲೇಗಾಂವ್ ಸ್ಫೋಟವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರಕರಣದಲ್ಲಿ ಬಹುಸಂಖ್ಯಾತ ಹಿಂದೂ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸುವ ಮೂಲಕ ತೀವ್ರ ವಿವಾದಕ್ಕೆ ಒಳಗಾಗಿದ್ದರು.
ವಿಜಯ್ ಸಲಸ್ಕರ್
ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಹೆಸರಾದ ವಿಜಯ್ ಸಲಸ್ಕರ್ ಸಹ ಕಾಮ್ಟೆಯೊಂದಿಗೆ ಉಗ್ರರ ದಾಳಿಗೆ ಬಲಿಯಾದರು. ಮುಂಬೈ ಭೂಗತ ಜಗತ್ತಿನ ಮಂದಿಗೆ ಸಿಂಹಸ್ವಪ್ನರಾಗಿದ್ದ ವಿಜಯ್ ಅನೇಕ ಭೂಗತ ವ್ಯಕ್ತಿಗಳನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ. ಭೂಗತ ಪಾತಾಕಿಗಳಾದ ಅಮರ್ ನಾಯಕ್, ಜಗ್ಗು ಶೆಟ್ಟಿ, ಸಾಧು ಶೆಟ್ಟಿ, ಕುಂದನ್ ಸಿಂಗ್ ರಾವತ್, ಜಹೂರ್ ಮಕಾಂದ್ ಸೇರಿದಂತೆ ಅನೇಕರು ಇವರ ಬಂದೂಕಿನ ಕಾಡತೂಸಿಗೆ ಸಿಕ್ಕು ಪ್ರಾಣ ಕಳೆದುಕೊಂಡಿದ್ದಾರೆ. 1983 ರಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಸೇರಿದ ವಿಜಯ್, ಕಳೆದ 24 ವರ್ಷಗಳ ಕಾಲ ನಿಶ್ವಾರ್ಥ ಸೇವೆ ಸಲ್ಲಿಸಿದ್ದಾರೆ.
ಅಶೋಕ್ ಕಾಮ್ಟೆ
ಮತ್ತೊಬ್ಬ ಐಪಿಎಸ್ ಅಧಿಕಾರಿ ಅಶೋಕ್ ಮಾರುತಿರಾವು ಕಾಮ್ಟೆ 1989ರ ಐಪಿಎಸ್ ಬ್ಯಾಚ್ ಗೆ ಸೇರಿದವರು. ಮೆಟ್ರೊ ಚಿತ್ರಮಂದಿರದ ಬಳಿ ಉಗ್ರರೊಂದಿಗಿನ ದಾಳಿಯಲ್ಲಿ ಅವರು ಮೃತಪಟ್ಟರು.
ಶಿವರಾಜ್ ಪಾಟೀಲ್ ಸಂತಾಪ: ದೇಶ ಇಂದು ಧೀರ ಅಧಿಕಾರಿಗಳನ್ನು ಕಳೆದುಕೊಂಡಿದೆ. ಈ ಸಾವುಗಳು ಪೊಲೀಸ್ ಇಲಾಖೆಯ ಜತೆಗೆ ದೇಶಕ್ಕೆ ಭಾರಿ ನಷ್ಟ ಉಂಟು ಮಾಡಿವೆ. ಭಯೋತ್ಪಾದಕರ ಅಟ್ಟಹಾಸಕ್ಕೆ ವೀರ ಯೋಧರನ್ನು ಕಳೆದುಕೊಳ್ಳುವ ಪ್ರಸಂಗ ಎದುರಾಗಿದೆ ಎಂದು ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಕಂಬನಿ ಮಿಡಿದರು. ಹುತಾತ್ಮರಾಗಿರುವ ಅಧಿಕಾರಿಗಳ ಕುಟುಂಬಕ್ಕೆ ಸರ್ಕಾರ ಎಲ್ಲ ರೀತಿಯ ನೇರವು ನೀಡಲಿದೆ. ಈ ಆಘಾತಕಾರಿ ಸನ್ನಿವೇಶವನ್ನು ತಡೆದುಕೊಳ್ಳುವ ಶಕ್ತಿಯನ್ನು ಮೃತ ಕುಟುಂಬ ಸದಸ್ಯರಿಗೆ ಆ ದೇವರು ನೀಡಲಿ ಎಂದು ಹೇಳಿದರು.(ಏಜೆನ್ಸೀಸ್)












Click it and Unblock the Notifications