ಜೆಡಿಎಸ್ ಮತ್ತೆ ಒಂದಾಗಲಿ:ಅನಂತಮೂರ್ತಿ
ಬೆಂಗಳೂರು, ನ.16:ಜ್ಞಾನಪೀಠ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿ ಅವರು ಜೆಡಿಎಸ್ ಪಕ್ಷದೊಂದಿಗೆ ತಮ್ಮ ಹಳೆಯ ದ್ವೇಷವನ್ನು ಮರೆತು ಸಖ್ಯ ಬೆಳೆಸಿದ್ದಾರೆ. ಜೆಡಿಎಸ್ ಮತ್ತೊಮ್ಮೆ ಒಗ್ಗೂಡುವ ಅಗತ್ಯ ಇದೆ ಎಂದು ಅವರು ಇಂದು ಪಕ್ಷದ ಕಚೇರಿಯಲ್ಲಿ ಪ್ರತಿಪಾದಿಸಿದರು. ಸೋಮವಾರ ಅರಮನೆ ಮೈದಾನದಲ್ಲಿ ಜೆಡಿಎಸ್ ಪಕ್ಷದಕಾಯಕಲ್ಪ ಪ್ರತಿಜ್ಞಾ ಸಮಾವೇಶ ಹಾಗೂ ನೂತನ ರಾಜ್ಯಾಧ್ಯಕ್ಷರ ಅಭಿನಂದನಾ ಸಮಾರಂಭ ನಡೆಯಲಿರುವ ಹಿನ್ನೆಲೆಯಲ್ಲಿ ಅನಂತಮೂರ್ತಿ ಅವರ ಪ್ರತಿಪಾದನೆ ಕುತೂಹಲ ಮೂಡಿಸಿದೆ.
ಜೆಡಿಎಸ್ ಹೊರತಂದಿರುವ 'ಬಿಜೆಪಿ ಸಖ್ಯ ಮತ್ತು ತರುವಾಯ ಪ್ರಮಾದವೇ? ಪ್ರಾಯಶ್ಚಿತ್ತವೇ-ಒಂದು ಪ್ರಾಂಜನ ಅವಲೋಕನ' ಎಂಬ ಪುಸ್ತಕವನ್ನು ಜೆಡಿಎಸ್ ಕಚೇರಿಯಲ್ಲಿ ಇಂದು ಬಿಡುಗಡೆ ಮಾಡಿದ ನಂತರ ಅವರು ಮಾತನಾಡುತ್ತಿದ್ದರು.
ಹರಿದು ಹಂಚಿಹೋಗಿರುವ ಜನತಾ ಪರಿವಾರ ಮತ್ತೆ ಒಂದಾಗಬೇಕಿದೆ. ಸಿದ್ದ್ದರಾಮಯ್ಯ, ಎಂಪಿ ಪ್ರಕಾಶ್, ಪಿಜಿಆರ್ ಸಿಂಧ್ಯಾ ಮುಂತಾದ ನಾಯಕರು ಜೊತೆಗೂಡಿ ಪಕ್ಷವನ್ನು ಸಂಘಟಿಸಬೇಕಾಗಿದೆ ಎಂದು ಸಲಹೆ ನೀಡಿದರು. ಜನತಾ ಪರಿವಾರ ಒಂದಾಗಲಿಕ್ಕೆ ದೇವೇಗೌಡರು ಅಡ್ಡಗಾಲು ಹಾಕುತ್ತಾರೆ ಎಂಬ ಮಾತಿನಲ್ಲಿ ಹುರುಳಿಲ್ಲ ಎಂದರು.
ರಾಜ್ಯಕ್ಕೆ ಸ್ಥಳೀಯ ಪಕ್ಷಗಳ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಅಲ್ಪ ಸಂಖ್ಯಾತರ ಬಗೆಗಿನ ಜೆಡಿಎಸ್ ಕಾಳಜಿ ತಮಗೆ ಇಷ್ಟವಾಗಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಉತ್ತಮ ಕೆಲಸ ಮಾಡಿದ್ದಾರೆ. ಈ ಕಾರಣಗಳಿಗಾಗಿ ತಾವು ಜೆಡಿಎಸ್ ನ್ನು ಬೆಂಬಲಿಸುತ್ತಿರುವುದಾಗಿ ಅನಂತಮೂರ್ತಿ ಸಮರ್ಥಿಸಿಕೊಂಡರು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications