ಉರಿಯುವ ಮನೆಯಲ್ಲಿ ಗಳ ಹಿರಿಬೇಡಿ
ಬೆಂಗಳೂರು, ನ. 14 : ಹಣಕ್ಕಾಗಿ ಟಿಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸಚಿವ ನರೇಂದ್ರಸ್ವಾಮಿ ಮಾಡಿರುವ ಆರೋಪಗಳಿಗೆ ಸಾಕ್ಷ್ಯಾದಾರಗಳಿದ್ದರೆ ಬಹಿರಂಗಪಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದರು. ಸಚಿವ ನರೇಂದ್ರಸ್ವಾಮಿ ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆ ತಪ್ಪಬಾರದು ಎಂದು ಕಿವಿ ಮಾತು ಹೇಳಿದ ಅವರು, 'ಉರಿಯುವ ಮನೆಯಲ್ಲಿ ಗಳ ಹಿರಿಯುವ ಕೆಲಸ' ಮಾಡುವುದು ಸರಿಯಲ್ಲ ಎಂದು ದೇಶಪಾಂಡೆ ತೀಕ್ಷ್ಣವಾಗಿ ತಿರುಗೇಟು ನೀಡಿದರು.
ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳು ಸಹಜ, ಆದರೆ ಟಿಪ್ಪಣಿ ವ್ಯಕ್ತಗತವಾಗಿರಬಾರದು. ಇನ್ನೊಬ್ಬರ ತೇಜೋವಧೆ ಮಾಡುವುದು ಟೀಕೆಯಲ್ಲ ಎಂದು ಕಿಡಿಕಾರಿದರು. ಸಚಿವರ ಬಳಿ ಈ ಆರೋಪಗಳ ಬಗ್ಗೆ ಅಗತ್ಯ ದಾಖಲೆಗಳಿದ್ದರೆ ಬಹಿರಂಗಪಡಿಸಿದರೆ ಟೀಕೆಗೆ ಬೆಲೆ ಬರಲಿದೆ. ಇದರಿಂದ ಸತ್ಯ ಹೊರಬರಲು ಸಾಧ್ಯವಾಗುತ್ತದೆ ಎಂದು ದೇಶಪಾಂಡೆ ಹೇಳಿದರು.
ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಣಕ್ಕಾಗಿ ಟಿಕೆಟ್ ಮಾರಿಕೊಂಡಿದ್ದಾರೆ. ಕಾಗೋಡು ತಿಮ್ಮಪ್ಪ, ಕೆ ಸಿ ಕೊಂಡಯ್ಯ ಅವರನ್ನು ಮಂಪರು ಪರೀಕ್ಷೆ ನಡೆಸಿದರು, ಸತ್ಯ ಬಹಿರಂಗವಾಗಲಿದೆ ಎಂದು ಸಚಿವ ನರೇಂದ್ರಸ್ವಾಮಿ ಆರೋಪಿಸಿದ್ದರು. ಕಾಗೋಡು ತಿಮ್ಮಪ್ಪ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿ ನರೇಂದ್ರಸ್ವಾಮಿ ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದರು. ಸಚಿವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು. ಈ ಮೊದಲು ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೆಟ್ ಆಳ್ವ ಈ ಆರೋಪ ಮಾಡಿದ್ದಕ್ಕಾಗಿ ಶಿಸ್ತು ಕ್ರಮಕ್ಕೆ ತಮ್ಮ ರಾಜೀನಾಮೆ ನೀಡಿದ್ದರು.
ಮೇವರಿಕ್ ಸಂಸ್ಥೆಯ ಹಗರಣ ಲೋಕಾಯುಕ್ತ ತನಿಖೆಗೆ ವಹಿಸಲಾಗಿದ್ದು, ತನಿಖೆಯಲ್ಲಿ ರಾಜಕೀಯ ಬೆರಸದೆ ನಿಷ್ಪಕ್ಷಪಾತವಾಗಿ ಸಮರ್ಪಕವಾದ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ದೇಶಪಾಂಡೆ ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications