ಒಕ್ಕಲಿಗರಿಗೆ ಮೀಸಲಾತಿ ಸರಿಯಲ್ಲ ಸುಪ್ರಿಂಕೋರ್ಟ್
ನವದೆಹಲಿ, ನ. 12 : ಒಕ್ಕಲಿಗರಂಥ ಮುಂದುವರಿದ ಜಾತಿಗಳಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೀಸಲು ಸೌಲಭ್ಯ ವಿಸ್ತರಿಸುವ ಕರ್ನಾಟಕ ನಿಲುವಿನ ಔಚಿತ್ಯವನ್ನು ಸುಪ್ರಿಂಕೋರ್ಟ್ ಪ್ರಶ್ನಿಸಿದೆ.
ಹೀಗೆ ಮಾಡುವುದರಿಂದ ಯಾರಿಗಾಗಿ ಈ ಸೌಲಭ್ಯವನ್ನು ಮಾಡಲಾಗಿತ್ತೊ ಅವರ ಹಕ್ಕುಗಳನ್ನು ಕಿತ್ತುಕೊಂಡಂತೆ ಆಗುವುದಿಲ್ಲವೇ ಎಂದು ಮುಖ್ಯನ್ಯಾಯಮೂರ್ತಿ ಡಾ. ಕೆ ಜಿ ಬಾಲಕೃಷ್ಣನ್, ನ್ಯಾಯಮೂರ್ತಿ ಆರ್ ವಿ ರವಿಂದ್ರನ್, ಡಿ ಕೆ ಜೈನ್, ಪಿ ಸದಾಶಿವಂ ಮತ್ತು ಜೆ ಎಂ ಪಾಂಚಾಲ್ ಅವರನ್ನು ಒಳಗೊಂಡ ಪೀಠ ರಾಜ್ಯದ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಅವರನ್ನು ಕೇಳಿದೆ. ಸರ್ಕಾರ ನಿಲುವು ಚೆನ್ನಪ್ಪ ರೆಡ್ಡಿ ವರದಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಆದರೆ, ಕರ್ನಾಟಕ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಸಮುದಾಯದಲ್ಲಿ ಮಾತ್ರವಲ್ಲದೆ, ಬ್ರಾಹ್ಮಣ ಹಾಗೂ ಜೈನ್ ಸಮುದಾಯದಲ್ಲೂ ಬಡವರಿದ್ದಾರೆ ಎಂದು ಹೇಳುವ ಮೂಲಕ ತನ್ನ ವಾದ ನ್ಯಾಯಯುತವಾಗಿದೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.
(ದಟ್ಸ್ ಕನ್ನಡ ವಾರ್ತೆ)