ಮಂಗಳೂರು,ಉಡುಪಿ ಖಾಸಗಿ ಬಸ್ ಗಳಿಗೆ ಕಡಿವಾಣ
ಮಂಗಳೂರು, ನ. 12 : ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಸಂಚಾರಿಸುತ್ತಿರುವ ಖಾಸಗಿ ಬಸ್ ಗಳಿಗೆ ಕಡಿವಾಣ ಹಾಕುವ ಸಲುವಾಗಿ ಈ ರಸ್ತೆಗಳಲ್ಲಿ ಸರ್ಕಾರಿ ಬಸ್ ಗಳನ್ನು ಓಡಿಸಲು ಸರ್ಕಾರ ತೀರ್ಮಾನಿಸಿದೆ.
ವರದಿಗಾರರ ಕೂಟದಲ್ಲಿ ಮಾತನಾಡಿದ ಸಾರಿಗೆ ಸಚಿವ ಅಶೋಕ್, ನಮ್ಮ ಪಕ್ಷದ ವಕ್ತಾರ ಧನಂಜಯ ಕುಮಾರ್ ಸರಕಾರದ ಈ ನಿರ್ಧಾರವನ್ನು ವಿರೋಧಿಸುತ್ತಿರುವುದು ಆಶ್ಚರ್ಯ ತಂದಿದೆ ಎಂದರು. ಈ ಎರಡು ಜಿಲ್ಲೆಯ ನಾಗರಿಕರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಸಾರಿಗೆ ಸಂಸ್ಥೆಯ ಬಸ್ ಗಳನ್ನೂ ಓಡಿಸಲು ನಿರ್ಧರಿಸಿದ ತಕ್ಷಣ ಅಲ್ಲಿ ಸಂಚರಿಸುವ ಖಾಸಗಿ ಬಸ್ ಗಳನ್ನೂ ಸಂಪೂರ್ಣ ನಿಷೇಧ ಮಾಡುವುದಿಲ್ಲ. ಯಾವ ಬಸ್ ನಲ್ಲಿ ಸಂಚರಿಸ ಬೇಕು ಎಂದು ಜನತೆ ತೀರ್ಮಾನ ತೆಗೆದುಕೊಳ್ಳಲಿ ಎಂದು ಅಶೋಕ್ ಹೇಳಿದರು.
ಕಳೆದ ಅನೇಕ ದಿನಗಳಿಂದ ಮಂಗಳೂರು, ಉಡುಪಿ ನಗರ ಸಂಚಾರ ಮತ್ತು ಈ ಎರಡು ಜಿಲ್ಲೆಗಳ ನಡುವಿನ ಬಸ್ ವ್ಯವಸ್ಥೆ ಈಗ ಸಂಪೂರ್ಣ ಖಾಸಗಿ ಬಸ್ ಮಾಲೀಕರ ಹತೋಟಿಯಲ್ಲಿದೆ. ಸರಕಾರ ಈಗ ಮಧ್ಯ ಪ್ರವೇಶಿಸಲು ನಿರ್ಧರಿಸಿದ್ದು, ಸರಕಾರಿ ಬಸ್ ಗಳನ್ನೂ ಸಂಚಾರಕ್ಕೆ ಓಡಿಸುವ ನಿರ್ಧರಿಸಿದೆ. ಹಿಂದಿನ ಜಿಲ್ಲೆ ಅಡಿಕರಿಯೊಬ್ಬರು ಖಾಸಗಿ ಬಸ್ ಗಳು ಮಾತ್ರ ನಗರ ಸಾರಿಗೆಯಲ್ಲಿ ಓಡಿಸಬೇಕೆಂದು ಆದೇಶ ನೀಡಿದ್ದರು, ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್ ಅವರು ಈ ಆದೇಶ ಹಿಂದಕ್ಕೆ ಪಡೆಯುವಂತೆ ಸೂಚನೆ ನೀಡಿದ್ದರು.
ಮಂಗಳೂರು ಮತ್ತು ಉಡುಪಿ ಯಲ್ಲಿ ಖಾಸಗಿ ಬಸ್ ಸಂಚರಿಸುವ ವಿಷಯದಲ್ಲಿ ಕಾಣಿದ ಪ್ರಬಲ ಕೈಗಳು ಕೆಲಸ ಮಾಡುತ್ತಿವೆ. ಈ ಹಿಂದೆ ಕೊಂಕಣ ರೈಲು ಯೋಜನೆಗೂ ವಿರೋಧ ವ್ಯಕ್ತ ಪಡಿಸಿ ಲಾಭಿ ಮಾಡಿದ್ದರು. ಆದ್ದರಿಂದ ಎಷ್ಟೇ ಒತ್ತಡ ಬಂದರೂ ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)