ಕುಕ್ಕೆಸುಬ್ರಮಣ್ಯ ನಾಗನಿಧಿಗೆ ಸರ್ಪಕಾವಲು!
ಕುಕ್ಕೆ ಸುಬ್ರಮಣ್ಯ, ನ. 12 : ಇಲ್ಲಿನ ಮೂಲ ನಾಗನ ಕ್ಷೇತ್ರವಾದ ಸುಬ್ರಮಣ್ಯ ಕಲ್ಕುಂದದ ಜಾನುವಾರು ಜಾತ್ರೆಯ ಮಜಲಿನಲ್ಲಿದ್ದ 'ನಾಗನಿಧಿ'ಯೊಂದನ್ನು ಮಂಗಳವಾರ ರಾತ್ರಿ ಐದು ಮಂದಿ ಅಗೆಯಲು ಯತ್ನಿಸಿ ಸಾರ್ವಜನಿಕರಿಂದ ಬ೦ಧನಕ್ಕೆ ಒಳಗಾದ ಘಟನೆ ನಡೆದಿದೆ.
ಕಲ್ಕುಂದದ ಜಾನುವಾರು ಜಾತ್ರೆಯ ನಡೆಯುವ ಪ್ರಮುಖ ಗದ್ದೆಯಾದ ಉಗ್ರಣಿಯವರ ಜಾಗದಲ್ಲಿ 'ನಾಗನಿಧಿ' ಇದೆ ಎನ್ನುವುದು ಇಲ್ಲಿನ ನಾಗರಿಕರ ನಂಬಿಕೆ. ಕಳೆದ ವರ್ಷ ಇಲ್ಲಿನ ವಿಷ್ಣುಮೂರ್ತಿ ದೇವಸ್ಥಾನದ 'ಅಷ್ಟಮಂಗಳ' ಪ್ರಶ್ನೆಯಲ್ಲಿ ಇಲ್ಲಿಯ ನಾಗನಿಧಿ ಬಗ್ಗೆ ಪ್ರಸ್ತಾಪವಾಗಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆಗೆ ಆರ್ಥಿಕ ತೊಂದರೆ ಉಂಟಾದಾಗ ಈ ನಿಧಿಯನ್ನು ಬಳಸಬೇಕೆಂದು ಆದೇಶವಾಗಿತ್ತು.
ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಮಾರುತಿ ಕಾರಿನಲ್ಲಿ ಬಂದ ಐದು ಜನರ ತಂಡವೊಂದು ನಾಗನಿಧಿ ಬಳಿ ಇರುವ ಪೊದೆಯನ್ನು ಹಾರೆ, ಪಿಕಾಸಿನಿಂದ ಅಗೆಯಲು ಆರಂಭಿಸಿದಾಗ ಸದ್ದು ಕೇಳಿ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಐದು ಜನರಲ್ಲಿ ಇಬ್ಬರನ್ನು ಹಿಡಿದು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.ನಾಗನಿಧಿಯ ಸರ್ಪಗಾವಲಾಗಿ ಎಂಟು ಅಡಿ ಉದ್ದದ ನಾಗರಹಾವೊಂದು ಪೊದೆಯ ಬಳಿ ಕಾವಲು ಇರುವುದು ಊರ ನಾಗರಿಕರಲ್ಲಿ ಭಯ, ಭಕ್ತಿ ಹೆಚ್ಚಿಸಿದೆ.
(ದಟ್ಸ್ ಕನ್ನಡ ವಾರ್ತೆ)