ಮ್ಯಾಗಿ ರಾಜೀನಾಮೆಅಂಗೀಕರಿಸಿದ ಕಾಂಗ್ರೆಸ್
ನವದೆಹಲಿ, ನ. 12 : ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮಾರ್ಗರೆಟ್ ಆಳ್ವ ನೀಡಿದ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಸ್ವೀಕರಿಸಿದೆ. ಆಳ್ವ ಮಾಡಿದ್ದ ಆರೋಪಗಳ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಶಿಸ್ತು ಸಮಿತಿ ನೀಡಿದ ವರದಿ ಆಧರಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾರ್ಗರೆಟ್ ಆಳ್ವ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ.
ಮಾರ್ಗರೆಟ್ ಆಳ್ವ ಕಳೆದ ನವೆಂಬರ್ 6 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಪಕ್ಷದ ಟಿಕೆಟ್ ಗಳು ಬಿಕರಿಯಾಗಿವೆ ಎಂದು ಆರೋಪ ಮಾಡಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕಮಾಂಡ್ ಆಳ್ವ ಮಾಡಿರುವ ಆರೋಪಗಳ ಸತ್ಯಾಸತ್ಯತೆ ತಿಳಿಯಲು ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ನೇತೃತ್ವದ ಶಿಸ್ತು ಸಮಿತಿ ರಚಿಸಿ ಮೂರು ದಿನದೊಳಗೆ ವರದಿ ನೀಡುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಳ್ವ ಅವರು ಶಿಸ್ತು ಸಮಿತಿ ಎದುರಿಸಿ ತಮ್ಮ ಆರೋಪಗಳನ್ನು ಕುರಿತು ಹೇಳಿಕೆ ನೀಡಿದ್ದರು. ಆ ನಂತರ ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಅವರು ಆಳ್ವ ಆರೋಪಗಳಲ್ಲಿ ಹುರುಳಿಲ್ಲ. ಆದ್ದರಿಂದ ತನಿಖೆಯನ್ನು ಕೈಬಿಡಲಾಗುವುದು ಎಂದು ಹೇಳಿಕೆ ನೀಡಿದ್ದರು.
ಇಂದು ಸೋನಿಯಾಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಳ್ವ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದಾರೆ. ಹಾಗೆಯೇ ಪಕ್ಷದ ಕಾರ್ಯಕಾರಿ ಸಮಿತಿ ಹಾಗೂ ಐದು ರಾಜ್ಯಗಳಲ್ಲಿ ನಡೆಯಬೇಕಿರುವ ವಿಧಾನಸಭೆ ಚುನಾವಣೆ ಉಸ್ತುವಾರಿಗೆ ವಹಿಸಿದ್ದ ಜವಾಬ್ದಾರಿಯನ್ನೂ ಸಹ ಕಸಿದುಕೊಳ್ಳಲಾಗಿದೆ. ಮಾರ್ಗೆರೆಟ್ ಅಳ್ವ ತಲೆದಂಡಕ್ಕೆ ಹಿರಿಯ ನಾಯಕರು ಒತ್ತಾಯಿಸಿರುವ ಸುದ್ದಿಯೂ ದಟ್ಟವಾಗಿದೆ.
(ದಟ್ಸ್ ಕನ್ನಡ ವಾರ್ತೆ)