ಕೆ.ಜಿ.ಎಫ್ : ಅಂತರ್ಜಾಲ ಪ್ರಪಂಚ-2008
ಕೆಜಿಎಫ್, ನ. 7 : ಭಾರತ ಮಾಹಿತಿ ತಂತ್ರಜ್ಞಾನ ರಂಗದಲ್ಲಿ ಅಪಾರ ಪ್ರಗತಿ ಸಾಧಿಸಿದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ತಂತ್ರಾಂಶಗಳ ಕುರಿತಂತೆ ಸಂಶೋಧನೆಯಾಗಬೇಕು ಎಂದು ಜಿಲ್ಲಾಧಿಕಾರಿ ಎಚ್.ಆರ್. ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕೆ.ಜಿ.ಎಫ್.ನ ಡಾ: ಟಿ.ತಿಮ್ಮಯ್ಯ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಬೆಂಗಳೂರಿನ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ ಟಿ ತಿಮ್ಮಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿರುವ ವಿದ್ಯಾರ್ಥಿ ಅಂತರ್ಜಾಲ ಪ್ರಪಂಚ -2008 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದ ರಾಜಧಾನಿ ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂದು ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದ್ದು, ಐ.ಟಿ ಕ್ಷೇತ್ರದಲ್ಲಿ ಭಾರತ ಅಗಾಧ ಪ್ರಗತಿ ಸಾಧಿಸಿದೆ ಎಂದರು. ಭಾರತದ ಮಾರುಕಟ್ಟೆ ಮುಕ್ತ ಆರ್ಥಿಕ ವ್ಯವಸ್ಥೆಯಡಿ ವಿದೇಶಿ ಮಾರುಕಟ್ಟೆಗಳಿಗೆ ತೆರೆದುಕೊಂಡಾಗಿನಿಂದ ಸಾಕಷ್ಟು ಪ್ರಗತಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಾಗಿದೆ ಎಂದ ಜಿಲ್ಲಾಧಿಕಾರಿಗಳು, ಅಮೇರಿಕಾದ ಕಂಪೆನಿಗಳು ಅಲ್ಲಿನ ಕೆಲಸಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭಾರತಕ್ಕೆ ನೀಡಿ, ಕಡಿಮೆ ಖರ್ಚಿನಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಇವೆಲ್ಲ ಒಂದೇ ರೀತಿಯ ತಂತ್ರಾಂಶವನ್ನು ಬಳಸುವ ಕೆಲಸಗಳಾಗಿದ್ದು, ಕೆಲವು ಜನರ ಜೀವನಮಟ್ಟ ಸುಧಾರಣೆಯಾಗಿರುವುದನ್ನು ಬಿಟ್ಟರೆ ಇದರಿಂದ ಯಾವ ಪ್ರಯೋಜನವಿಲ್ಲ. ನೂತನ ತಂತ್ರಾಂಶ ಸಂಶೋಧನಾ ಕೆಲಸಗಳು ಭಾರತದಲ್ಲಿ ಆಗಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಪಂ. ಉಪಾಧ್ಯಕ್ಷರಾದ ಅಪ್ಪಿ ವೆಂಕಟರಾಮರೆಡ್ಡಿ ವಹಿಸಿದ್ದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ವಿ.ರಂಗರಾವ್, ಬಂಗಾರಪೇಟೆ ತಹಶೀಲ್ದಾರ್ ಜಿ.ಕೆ. ನಾಗರಾಜ್, ಕೆ.ಜಿ.ಎಫ್. ನಗರದ ವಿಶೇಷ ತಹಶೀಲ್ದಾರ್ ಡಾ. ದಾಕ್ಷಾಯಿಣಿ, ಪೌರಾಯುಕ್ತ ಆರ್.ಎಸ್.ಯರ್ರಪ್ಪ, ಎನ್.ಐ.ಸಿ. ಅಧಿಕಾರಿ ಉಮಾಶಂಕರ್, ಸಾ.ಶಿ.ಇ. ಉಪನಿರ್ದೇಶಕ ನಾಗರಾಜನ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ವಿ. ಪದ್ಮನಾಭಯ್ಯ, ಮಲ್ಲಶೆಟ್ಟಿ, ಡಾ: ಟಿ.ತಿಮ್ಮಯ್ಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ: ಸೈಯದ್ ಆರೀಫ್ ಮತ್ತಿತರರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications