ಅಸೋಚಮ್ ಹೇಳಿಕೆ ಬೇಜವಾಬ್ದಾರಿತನದ್ದು : ಕೇಂದ್ರ
ಬೆಂಗಳೂರು, ಅ. 30 : ಭಾರತದಲ್ಲಿ ಉದ್ಭವಿಸಿರುವ ಆರ್ಥಿಕ ಹಿನ್ನೆಡೆಯ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಶೇ. 25ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಖಿಲ ಭಾರತ ಕೈಗಾರಿಕೆ ಹಾಗೂ ವಾಣಿಜ್ಯ ಉದ್ಯಮಿದಾರರ ಸಂಘದ (Assocham) ನೀಡಿದ್ದ ಹೇಳಿಕೆ ಆಧಾರರಹಿತ ಮತ್ತು ಬೇಜವಾಬ್ದಾರಿತನದಿಂದ ಕೂಡಿದೆ ಎಂದು ಕೇಂದ್ರ ಸರ್ಕಾರ ತರಾಟಾಗೆ ತೆಗೆದುಕೊಂಡಿದೆ.
ಅಸೋಚಮ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಿದ್ದ ಕೇಂದ್ರ ವಾಣಿಜ್ಯ ಮತ್ತು ಇಂಧನ ಖಾತೆ ರಾಜ್ಯ ಸಚಿವ ಜೈರಾಮ್ ರಮೇಶ್ ಅವರು, ವಾಣಿಜ್ಯ ಉದ್ದಿಮೆದಾರರ ಸಂಘದ ಅಧ್ಯಯನ ದಾರಿತಪ್ಪಿಸುವಂತಿದೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು, ಮುಂಬರುವ ದಿನಗಳಲ್ಲಿ ಉದ್ಯೋಗಿಗಳನ್ನು ತೆಗೆದುಕೊಳ್ಳುವಲ್ಲಿ ಶೇ. 25ರಷ್ಟು ಹಿನ್ನೆಡೆಯಾಗಲಿದೆ ಎಂದು ಸಂಘ ಹೇಳಿಕೆ ನೀಡಿದ್ದರೆ ಸರಿಯಾಗಿರುತ್ತಿತ್ತು. ಆದರೆ, ಸಂಘ ನೀಡಿದ ಹೇಳಿಕೆ ಸಂಪೂರ್ಣ ತಪ್ಪು ಮತ್ತು ಕಲ್ಪನಸಾಧ್ಯ ಎಂದು ಹೇಳಿದರು.
ದೀಪಾವಳಿ ನಂತರ 10 ದಿನಗಳಲ್ಲಿ ಭಾರತಾದ್ಯಂತ ಉಕ್ಕು, ಸಿಮೆಂಟ್, ಕಟ್ಟಡ ನಿರ್ಮಾಣ, ರಿಯಲ್ ಎಸ್ಟೇಟ್, ವಿಮಾನಯಾನ, ಐಟಿ ಆಧಾರಿತ ಉದ್ಯಮ, ಹಣಕಾಸು ಕ್ಷೇತ್ರಗಳಲ್ಲಿ ಶೇ. 25ರಿಂದ 30ರಷ್ಟು ಜನ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಸೋಚಮ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು.
ಇನ್ಫೋಸಿಸ್ ಸಹಅಧ್ಯಕ್ಷ ನಂದನ್ ನಿಲೇಕಣಿ ಅವರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಲಿದೆ. ಆದರೆ, ಕೆಲಸಗಾರರನ್ನು ಮನೆಗೆ ಕಳಿಸುವ ಸಾಧ್ಯತೆಗಳಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ದೇಶದಲ್ಲಿ
ಮತ್ತಷ್ಟು
ನೌಕರರಿಗೆ
ಪಿಂಕ್
ಸ್ಲಿಪ್
ರೆಡಿ