ಜೆಟ್ ಏರವೇಸ್ ನೌಕರರು ಮರುನೇಮಕ
ಮುಂಬೈ, ಅ. 17 : 1900 ನೌಕರರ ವಜಾ ನಿರ್ಧಾರದಿಂದ ತೀವ್ರ ಟೀಕೆಗೆ ಒಳಗಾಗಿದ್ದ ಜೆಟ್ ಏರವೇಸ್ ಸಂಸ್ಥೆ ತನ್ನ ಉದ್ಯೋಗಿಗಳನ್ನು ಮರುನೇಮಕ ಮಾಡಿಕೊಳ್ಳುವುದಾಗಿ ಗುರುವಾರ ರಾತ್ರಿ ಪ್ರಕಟಿಸಿದೆ.
ವಜಾಗೊಂಡ ನೌಕರರು ನನ್ನ ಕುಟುಂಬವಾಗಿದ್ದು, ನಾಳೆಯಿಂದಲೇ ಅವರೆಲ್ಲರೂ ಕೆಲಸಕ್ಕೆ ಹಾಜರಾಗಬಹುದು ಎಂದು ಸಂಸ್ಥೆಯ ಅಧ್ಯಕ್ಷ ನರೇಶ್ ಗೋಯಲ್ ಗುರುವಾರ ರಾತ್ರಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಆದರೆ ತಾವು ಯಾವುದೇ ಒತ್ತಡಕ್ಕೆ ಮಣಿದಿಲ್ಲ ಎಂದಿರುವ ಗೋಯಲ್, ನೌಕರರಿಗೆ ಅಗುವ ಅನ್ಯಾಯ ಮತ್ತು ನೋವು ನನಗೆ ಮನದಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಮಾನವೀಯತೆ ನೆಲೆಗಟ್ಟಿನಲ್ಲಿ ವಜಾಗೊಂಡ ಅಷ್ಟೂ ನೌಕರರನ್ನು ಮತ್ತೆ ನೇಮಕ ಮಾಡಿಕೊಳ್ಳುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಜೆಟ್ ಏರವೇಸ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸರೋಜ್ ಕೆ. ದತ್ತ ಉಪಸ್ಥಿತರಿದ್ದರು.
ಜೆಟ್ ಏರವೇಸ್ ನೌಕರರನ್ನು ಏಕಾಏಕಿ ವಜಾಗೊಳಿಸಿದ ಕ್ರಮವನ್ನು ಖಂಡಿಸಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಪ್ರತಿಭಟನೆಗೆ ಮುಂದಾಗಿ ಜೆಟ್ ಏರವೇಸ್ ಕಂಪನಿಗೆ ಸೇರಿದ ವಿಮಾನಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು. ಈ ಎಲ್ಲ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಸಂಸ್ಥೆ ಈ ನಿರ್ಧಾರ ತಳೆದಿರಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಆತಂಕದಲ್ಲಿದ್ದ ನೌಕರರು ಮರುನೇಮಕದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
850 ನೌಕರರಿಗೆ ಪಿಂಕ್ ಸ್ಲಿಪ್ ನೀಡಿದ ಜೆಟ್ ಏರ್












Click it and Unblock the Notifications