ಸಚಿವ ಅಸ್ನೋಟಿಕರ್ ವಿರುದ್ಧ ಕ್ರಿಮಿನಲ್ ಕೇಸ್
ಕಾರವಾರ, ಅ. 14 : ಕೊನೆಗೂ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಸುಳ್ಳು ಅಫಿಡ್ ವಿಟ್ ಪ್ರಕರಣ ಈದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಕಾರವಾರ ತಹಸೀಲ್ದಾರ್ ಸಾವಂತ್ ಅವರು ಸೋಮವಾರ ಅಸ್ನೋಟಿಕರ್ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆನಂದ ಅಸ್ನೋಟಿಕರ್ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ತಾಲ್ಲೂಕಿನ ಮುಡಗೇರಿಯಲ್ಲಿ ಏಳು ಎಕರೆ ಜಮೀನನ್ನು ಮರೆಮಾಚಲಾಗಿದೆ ಎಂದು ವಿಶ್ವೇಂಬರ್ ತಳೇಕರ್ ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ವಿಜಯ ಮಹಾಂತೇಶ್ ಅವರು, ಆನಂದ ಅಸ್ನೋಟಿಕರ್ ನೀಡಿರುವ ಪ್ರಮಾಣ ಪತ್ರ ಅಪೂರ್ಣ ಹಾಗೂ ಸುಳ್ಳಿನಿಂದ ಕೂಡಿದೆ ಎಂದು ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಕಾರವಾರ ತಹಸೀಲ್ದಾರರಿಗೆ ಸೂಚಿಸಿದ್ದರು.
ಕಳೆದ ಚುನಾವಣೆ ವೇಳೆ ಸುಳ್ಳು ಆಸ್ತಿ ಪ್ರಮಾಣ ಪತ್ರ ನೀಡಿರುವ ಅಸ್ನೋಟಿಕರ್ ವಿರುದ್ಧ ಸಿಆರ್ ಪಿಸಿ ಸೆಕ್ಷನ್ 195 ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅ. 10 ರಂದು ಸೂಚಿಸಿದ್ದರು. ಅಸ್ನೋಟಿಕರ್ ವಿರುದ್ಧ ಕ್ರಮ ಜರುಗಿಸುವಂತೆ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸಹ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿಗಳು ನಿರ್ದೇಶನ ನೀಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ರಂಗೇರಿದ ಉಪಚುನಾವಣೆ ಸಿದ್ಧತೆ