ಬರಲಿದೆ, ರಾಜಕುಮಾರ್ ನೆನಪಿನಲ್ಲಿ ಅಂಚೆಚೀಟಿ
ನವದೆಹಲಿ, ಅ. 14 : ಕನ್ನಡಿಗರ ಕಣ್ಮಣಿ ನಟಸಾರ್ವಭೌಮ ದಿವಂಗತ ಡಾ. ರಾಜಕುಮಾರ್ ಅವರ ನೆನಪಿನಲ್ಲಿ ಅಂಚೆಚೀಟಿ ತರಲು ಕೇಂದ್ರ ಸರ್ಕಾರ ಅಂತೂ ಇಂತೂ ಠಸ್ಸೆ ಒತ್ತಿದೆ. ಈ ವಿಷಯವನ್ನು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿಯವರು ಸೋಮವಾರ ಹೊರಗೆಡಹಿದ್ದಾರೆ.
ಕೇಂದ್ರ ಐಟಿ ಮತ್ತು ಸಂಪರ್ಕ ಖಾತಿ ಸಚಿವ ಎ ರಾಜಾ ಅವರು ಈ ಕುರಿತಾಗಿ ಒಪ್ಪಿಗೆ ನೀಡಿರುವ ಪತ್ರ ಬರೆದಿರುವುದಾಗಿ ಮೊಯ್ಲಿ ತಿಳಿಸಿದ್ದಾರೆ. ರಾಜಕುಮಾರ್ ಚಿತ್ರವಿರುವ ಅಂಚೆಚೀಟಿ ಸದ್ಯದಲ್ಲೇ ಹೊರಬರಲಿದೆ.
ಅಂಚೆಚೀಟಿಯಲ್ಲಿ ಕನ್ನಡಿಗರು ಕಾಣಿಸಿಕೊಳ್ಳುತ್ತಿರುವ ಸುದ್ದಿ ಸಮಸ್ತ ಕನ್ನಡಿಗರಿಗೆ ಒಂದು ಬದಿಯಿಂದ ನೋಡಿದರೆ ಸಂತಸದ ಸುದ್ದಿಯಾದರೆ, ಇನ್ನೊಂದು ಬದಿಯಿಂದ 'ಅಂತೂ ಇಂತೂ ಒಬ್ರಾದ್ರೂ ಕಾಣಿಸಿಕೊಂಡ್ರಲ್ಲಾ' ಎಂದು ಹತಾಶೆಯಿಂದ ಹೇಳುವಂಥದ್ದು.
ಇದಕ್ಕೆ ಕಾರಣಗಳೂ ಅನೇಕವಿವೆ. ಭಾರತಕ್ಕೆ ಸ್ವತಂತ್ರ್ಯ ಬಂದಾಗಿನಿಂದ ಕೇಂದ್ರ ಸರ್ಕಾರ ಹೊರಡಿಸಿರುವ ಅಂಚೆಚೀಟಿಗಳಲ್ಲಿ ಕನ್ನಡಿಗರು, ಕರ್ನಾಟಕ ಸಂಸ್ಕೃತಿ ಬಿಂಬಿಸುವ ಚಿತ್ರ ಬಂದಿರುವುದು ಕೇವಲ ಬೆರಳೆಣಿಕೆಯ ಸಂಖ್ಯೆಗಳಲ್ಲಿ ಮಾತ್ರ. 1960ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ, 1979ರಲ್ಲಿ ಭಕ್ತಿ ಭಂಡಾರಿ ಬಸವಣ್ಣ ಮತ್ತು ಮೊದಲ ನಾಲ್ಕು ಜ್ಞಾನಪೀಠ ಪ್ರಶಸ್ತಿ ಗಳಿಸಿದ ಸಾಹಿತಿಗಳನ್ನು ಒಟ್ಟಾಗಿ ಸೇರಿಸಿ ತಂದ ಅಂಚೆ ಚೀಟಿಗಳನ್ನು ಹೊರತುಪಡಿಸಿದರೆ ಅಂಚೆಚೀಟಿಗೆ ಸಂಬಂಧಿಸಿದಂತೆ ಕನ್ನಡಿಗರ ಮುಖದಲ್ಲಿ ಅಂಥ ಮಂದಹಾಸವೇನೂ ಮೂಡುವುದಿಲ್ಲ.
ನಮ್ಮ ಸಂಸದರೂ ಈ ವಿಷಯದಲ್ಲಿ ನಿಷ್ಕ್ರಿಯರಾಗಿರುವುದು ಇದಕ್ಕೆ ಕಾರಣವಿದ್ದರೂ ಇರಬಹುದು. ಅದೇ ತಮಿಳುನಾಡಿನ ವಿಷಯ ತೆಗೆದುಕೊಂಡರೆ, 2006ರಲ್ಲೇ 17 ಅಂಚೆಚೀಟಿಗಳನ್ನು ಕೇಂದ್ರ ಸರ್ಕಾರ ಹೊರತಂದಿದೆ ಎಂಬುದು ಗಮನಾರ್ಹ! ಆಗ ಕೇಂದ್ರದಲ್ಲಿ ಇದ್ದವರು ತಮಿಳಿಗರೇ ಆದ ದಯಾನಿಧಿ ಮಾರನ್. ಇದಕ್ಕಾಗಿ ಮಾರನ್ ಅವರನ್ನು ಪ್ರಶಂಸಿಸಲೇಬೇಕು. ಇದೇ ಒತ್ತಡವನ್ನು ನಮ್ಮ ಸಂಸದರೂ ಹೇರಿದ್ದರೆ ರಾಷ್ಟ್ರಕ್ಕಾಗಿ, ಕಲೆಗಾಗಿ ಸಾಕಷ್ಟು ಬೆವರು ಹರಿಸಿರುವ ಕರ್ನಾಟಕದ ಇನ್ನೂ ಅನೇಕರು ಅಂಚೆಚೀಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದುದರಲ್ಲಿ ಅನುಮಾನವಿಲ್ಲ. ಸ್ವಾತಂತ್ರ್ಯ ಸೇನಾನಿಗಳು, ಸಾಹಿತಿಗಳು ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ 'ಸ್ಟ್ಯಾಂಪ್' ಒತ್ತಿದ್ದರೂ ಸ್ಟ್ಯಾಂಪ್ ಗಳಲ್ಲಿ ಕಾಣಿಸಿಕೊಳ್ಳುವ ಭಾಗ್ಯ ಇಲ್ಲಿಯವರೆಗೆ ದೊರೆತಿಲ್ಲ.
ಈಗ, ರಾಜಕುಮಾರ್ ಅವರ ಚಿತ್ರ ಅಂಚೆಚೀಟಿಯಲ್ಲಿ ಮೂಡಿಬರುತ್ತಿರುವುದು ಕನ್ನಡಿಗರಿಗೆ ಸಂತಸ ತರಲಿದೆ. ಈ ಕಾರಣದಿಂದಲಾದರೂ ಆತ್ಮೀಯರಿಗೆ ಪತ್ರ ಬರೆದು ರಾಜ್ ಅಂಚೆಚೀಟಿ ಅಂಟಿಸಿ ಪತ್ರ ಬರೆಯುವ ಸಂಸ್ಕೃತಿಯನ್ನು ಕನ್ನಡಿಗರು ಮತ್ತಷ್ಟು ಜೀವಂತವಿಡಲಿ ಎಂಬುದು ದಟ್ಸ್ ಕನ್ನಡದ ಆಶಯ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications