ಸದ್ಯಕ್ಕೆ ಭಜರಂಗದಳದ ನಿಷೇಧವಿಲ್ಲ: ಕೇಂದ್ರ
ನವದೆಹಲಿ , ಅ.9: ಸದ್ಯಕ್ಕೆ ಭಜರಂಗದಳದ ಮೇಲೆ ನಿಷೇಧವನ್ನು ಹೇರುವುದಿಲ್ಲ ಹಾಗೂ ಗಲಭೆ ಯುಕ್ತ ಒರಿಸ್ಸಾ ಮತ್ತು ಕರ್ನಾಟಕ ಸರ್ಕಾರಗಳನ್ನು ವಜಾಗೊಳಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕರ್ನಾಟಕ, ಒರಿಸ್ಸಾ ಸೇರಿದಂತೆ ಹಲವೆಡೆ ನಡೆದ ಚರ್ಚ್ ಗಳ ಮೇಲಿನ ದಾಳಿ ಹಿನ್ನೆಲೆಯಲ್ಲಿ ಭಜರಂಗದಳ ಹಿಂದೂ ಸಂಘಟನೆಯ ಮೇಲೆ ನಿಷೇಧ ಹೇರಿಕೆಯವಿಷಯವಾಗಿ ಬುಧವಾರ ನಡೆದ ಕೇಂದ್ರ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ರಾಮ್ ವಿಲಾಸ್ ಪಾಸ್ವಾನ್, ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಹಲವು ನಾಯಕರು ಕರ್ನಾಟಕ ಹಾಗೂ ಒರಿಸ್ಸಾದಲ್ಲಿ ನಡೆದ ಚರ್ಚ್ ಗಳ ಮೇಲಿನ ದಾಳಿಯನ್ನು ಖಂಡಿಸಿ, ಎರಡೂ ಸರ್ಕಾರಗಳನ್ನು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿದರು. ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸುವ ಭಜರಂಗದಳಕ್ಕೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದರು.
ಹಿರಿಯ ಕಾಂಗ್ರೆಸ್ ಅರ್ಜುನ್ ಸಿಂಗ್, ಎ .ಆರ್. ಅಂತುಲೆ, ಜೈಪಾಲ್ ರೆಡ್ಡಿ ಮುಂತಾದವರು ಕೂಡ ಲಾಲೂ ಜತೆಗೆ ದನಿಗೂಡಿಸಿದರು. ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹಾಗೂ ಕೃಷಿ ಸಚಿವ ಶರದ್ ಪವಾರ್ ರಂತಹ ಹಿರಿಯರ ಅನುಪಸ್ಥಿತಿಯನ್ನು ಸದನದ ಗಮನಕ್ಕೆ ತಂದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು, ಈ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲೆಹಾಕುವುದು ಒಳ್ಳೆಯದು. ಸದ್ಯಕ್ಕೆ ಭಜರಂಗದಳ ನಿಷೇಧ ಹಾಗೂ ಒರಿಸ್ಸಾ, ಕರ್ನಾಟಕ ಸರ್ಕಾರಗಳ ವಜಾ ಮಾಡುವ ಬಗ್ಗೆ ಆತುರಬೇಡ ಎಂದು ಹೇಳಿದರು.
(ದಟ್ಸ್ ಕನ್ನಡವಾರ್ತೆ)
ಭಜರಂಗದಳ ನಿಷೇಧಿಸಲು ಚಿಂತನೆ












Click it and Unblock the Notifications