ತಿಲಕವಿಟ್ಟ ಹರ್ಭಜನ್ ಮೇಲೆ ಸಿಖ್ಖರ ಕೆಂಗಣ್ಣು
ಅಮೃತಸರ್ , ಅ.9: ಭಾರತೀಯ ಕ್ರಿಕೆಟ್ ನ ಮುಖ್ಯ ಸ್ಪಿನ್ನರ್ ಹರ್ಭಜನ್ ಮತ್ತೆ ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡಿದ್ದಾರೆ. ವಿಶೇಷವೆಂದರೆ ಈ ಬಾರಿ ಮೈದಾನದ ಹೊರಗೆ ತಮ್ಮ ವೇಷ ಭೂಷಣ, ನೃತ್ಯದಿಂದ ಸಿಖ್ ಸಮುದಾಯದ ಕೋಪಕ್ಕೆ ಗುರಿಯಾಗಿದ್ದಾರೆ. ಕಲರ್ಸ್ ಟಿವಿ ಚಾಲೆನ್ ನ ಏಕ್ ಕಿಲಾಡಿ ಏಕ್ ಹಸೀನಾ ಕಾರ್ಯಕ್ರಮದಲ್ಲಿ ರಾವಣನ ವೇಷಧರಿಸಿ, ತಿಲಕ ಇಟ್ಟುಕೊಂಡು ಸೀತೆ ಪಾತ್ರಧಾರಿ ಮೋನಾ ಸಿಂಗ್ ಜತೆ ಕುಣಿದಿದ್ದು ಸಿಖ್ಖರನ್ನು ಕೆರಳಿಸಿದೆ.
ಹರ್ಭಜನ್ ಅವರು ಹಣೆಗೆ ತಿಲಕ ಇಟ್ಟುಕೊಂಡು, ರಾವಣ ವೇಷಧರಿಸಿ ಕುಣಿದು,ಸಿಖ್ ಸಮುದಾಯದ ಕಟ್ಟಳೆಗಳನ್ನು ಗಾಳಿಗೆ ತೂರಿದ್ದಾರೆ. ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಈ ರೀತಿಯ ನೃತ್ಯ ಖಂಡನೀಯ ಆದ್ದರಿಂದ ಹರ್ಭಜನ್ ಅವರು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು ಎಂದು ಸಿಖ್ ನ ಪರಮೋಚ್ಚ ಪ್ರಾತಿನಿಧಿಕ ಸಂಸ್ಥೆ ಅಕಾಲ್ ತಕ್ತ್ ನ ಮುಖ್ಯಸ್ಥ ಗುರ್ಭಚ್ಚನ್ ಸಿಂಗ್ ಹೇಳಿದರು.
ಈ ಮುಂಚೆ ಕೂಡ ಮದ್ಯದ ಕಂಪೆನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಹರ್ಭಜನ್ ತಮ್ಮ ಶಿಖೆಯನ್ನು ಬಿಚ್ಚಿ,ನಡೆದಿದ್ದರು. ಶಿರೋನಾಮಿ ಗುರುದ್ವಾರ ಪ್ರಬಂಧಕ ಸಮಿತಿ ಟಿವಿ ಷೋಗಳನ್ನು ಸೆನ್ಸಾರ್ ಮಾಡಲು ಆಗ್ರಹಿಸಿದ್ದು, ಹರ್ಭಜನ್ ಅವರಿಗೆ ಛೀಮಾರಿ ಹಾಕಿದೆ.
(ದಟ್ಸ್ ಕನ್ನಡವಾರ್ತೆ)