ಭಜರಂಗದ ಮೇಲೆ ನಿಷೇಧ ಹೇರುವ ಸಾಧ್ಯತೆ?
ನವದೆಹಲಿ, ಅ.8: ಕ್ರೈಸ್ತರು ಹಾಗೂ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ಆಗುತ್ತಿರುವ ದಾಳಿಗಳ ಕುರಿತು ಚರ್ಚಿಸಲು ಬುಧವಾರ ಸಂಜೆ ಕೇಂದ್ರ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ. ಕರ್ನಾಟಕ ಹಾಗೂ ಒರಿಸ್ಸಾದಲ್ಲಿ ಕ್ರೈಸ್ತರ ಮೇಲೆ ಆದ ದಾಳಿಗಳ ಹಿನ್ನೆಯಲ್ಲಿ ಭಜರಂಗ ದಳದ ಮೇಲೆ ನಿಷೇಧ ಹೇರುವ ಸಾಧ್ಯತೆಗಳಿವೆ.
ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಹಾಗೂ ಉಕ್ಕಿನ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಯುಪಿಎ ಸರ್ಕಾರದ ಮತ್ತಷ್ಟು ಸಚಿವರು ಭಜರಂಗ ದಳವನ್ನು ನಿಷೇಧಿಸುವಂತೆ ಸಭೆಯಲ್ಲಿ ಒತ್ತಾಯಿಸುವ ಸಾಧ್ಯತೆಗಳಿವೆ. ಮಂಗಳವಾರ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಶಕೀಲ್ ಅಹಮದ್ ಮಾತನಾಡುತ್ತಾ, ಕಾನೂನು ಬಾಹಿರ ಸಂಘಟನೆಯಾದ ಸ್ಟುಡೆಂಟ್ ಇಸ್ಲಾಮಿಕ್ ಮುವ್ ಮೆಂಟ್ ಆಫ್ ಇಂಡಿಯಾ(ಸಿಮಿ)ಯನ್ನು ನಿಷೇಧಿಸಿದಂತೆ ಭಜರಂಗದಳವನ್ನು ನಿಷೇಧಿಸಬೇಕು. ಭಜರಂಗದಳವು ಒಂದು ಉಗ್ರವಾದ ಸಂಘಟನೆ ಇದ್ದಂತೆ ಎಂದು ಕಿಡಿಕಾರಿದ್ದರು.
''ಭಜರಂಗದಳವು ಭಯೋತ್ಪಾದನೆಯನ್ನು ಹುಟ್ಟುಹಾಕುತ್ತಿರುವ ಉಗ್ರವಾದಿ ಸಂಸ್ಥೆ ಎಂಬಸಣ್ಣ ಅನುಮಾನ ನನ್ನನ್ನು ಕಾಡುತ್ತಿದೆ . ಸಿಮಿ ಸಂಘಟನೆಯನ್ನು ನಿಷೇಧಿಸಿದಂತೆ ಯಾವುದೇ ಮುಲಾಜಿಲ್ಲದಂತೆ ಭಜರಂಗದಳವನ್ನು ಕೇಂದ್ರ ಸರ್ಕಾರ ನಿಷೇಧಿಸಬೇಕು ಎಂದು ಅಹಮದ್ ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಇಂದು ನಡೆಯಲಿರುವ ಸಂಪುಟ ಸಭೆಯು ರಾಜಕೀಯವಾಗಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ.
(ಏಜೆನ್ಸೀಸ್)
ಭಜರಂಗದಳವನ್ನು ನಿಷೇಧಿಸಿ :ಶರದ್ ಪವಾರ್