ಭಜರಂಗದಳವನ್ನು ನಿಷೇಧಿಸಿ :ಶರದ್ ಪವಾರ್
ಅಲಿಬಾಗ್(ಮಹಾರಾಷ್ಟ್ರ), ಅ. 6 : "ಮುಸ್ಲಿಮರು ಹಿಂದುಗಳ ಮೇಲೆ ದಾಳಿ ನಡೆಸಿದರೆ ಅದು ಭಯೋತ್ಪಾದನೆ, ಆದರೆ ಹಿಂದುಗಳು ಮುಸ್ಲಿಮರ ಮೇಲೆ ದಾಳಿ ನಡೆಸಿದರೆ ಅದು ಭಯೋತ್ಪಾದನೆ ಅಲ್ಲವೇ", ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಸಿಮಿ ಸಂಘಟನೆಯನ್ನು ನಿಷೇಧಿಸುವುದಾದರೆ, ಅಲ್ಪಸಂಖ್ಯಾತರಿಗೆ ಸಿಂಹಸ್ವಪ್ನವಾಗಿರುವ ಭಜರಂಗದಳ ಹಾಗೂ ಸನಾತನ ಪ್ರಭಾತ್ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಕೇಂದ್ರ ಕೃಷಿ ಸಚಿವ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಪ್ರತಿಪಾದಿಸಿದ್ದಾರೆ.
ಸೋಮವಾರ ಥಾಣೆಯಲ್ಲಿ ನಡೆದ ಕೋಮುಗಲಭೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಮಿ ಸಂಘಟನೆಯನ್ನು ಖಂಡಿತವಾಗಿಯೂ ನಿಷೇಧಿಸಬೇಕು. ಹಿಂದು ಸಂಘಟನೆಗಳ ನೆಪದಲ್ಲಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಭಜರಂಗದಳವನ್ನೂ ನಿಷೇಧಿಸಬೇಕು ಎಂದು ಪ್ರಧಾನಮಂತ್ರಿಯನ್ನು ಒತ್ತಾಯಿಸಿದರು. ಒರಿಸ್ಸಾ. ಕರ್ನಾಟಕದಲ್ಲಿ ಚರ್ಚ್ ಗಳ ಮೇಲೆ ದಾಳಿ ನಡೆಸಿ ಕ್ರಿಶ್ಚಿಯನ್ ಸಮುದಾಯಕ್ಕೆ ಕಿರುಕುಳ ನೀಡಿರುವುದುಖಂಡನೀಯ. ಆ ಗಾಯ ಮಾಯವಾಗುವ ಮೊದಲೇ ಠಾಣೆಯಲ್ಲಿ ಕೋಮುಗಲಭೆ ಶುರುವಾಗಿದೆ ಎಂದು ಕಿಡಿಕಾರಿದರು.
ದೇಶದಲ್ಲಿ ಮುಸ್ಲಿಮ್ ಸಂಘಟನೆಗಳು ನಡೆಸುತ್ತಿರುವ ವಿಧ್ವಂಸಕಗಳಿಂದ ಮಾತ್ರ ಸಮಾಜದ ಶಾಂತಿ ನಾಶವಾಗಿಲ್ಲ. ಹಿಂದೂ ಸಂಘಟನೆಗಳ ಹೆಸರಿನಲ್ಲಿ ಭಜರಂಗದಳ ಹಾಗೂ ಸನಾತನ ಪ್ರಭಾತ್ ಸಂಘಟನೆಗಳು ಅಲ್ಪಸಂಖ್ಯಾತರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿವೆ. ಇದರ ಪರಿಣಾಮ ಇಂದು ದೇಶಕ್ಕೆ ಗಂಡಾಂತರ ಎದುರಾಗಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.
ಉಗ್ರರನ್ನು ಸೆದೆಬಡಿಯಬೇಕಿದೆ. ಉಗ್ರರ ಉಪಟಳ ಮೇರೆ ಮೀರಿದ್ದು, ಅದನ್ನು ಸವಾಲಾಗಿ ಸ್ವೀಕರಿಸಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಕಾನೂನು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಶರದ್ ಪವಾರ್ ಹೇಳಿದರು. ಸಮಾಜ ವಿದ್ರೋಹಿ ಕೃತ್ಯಗಳಲ್ಲಿ ತೊಡಗಿರುವ ಎಲ್ಲ ಸಂಘಟನೆಗಳನ್ನು ನಿರ್ದಾಕ್ಷಿಣ್ಯವಾಗಿ ನಿಷೇಧಿಸಬೇಕು ಎಂದು ಅವರು ಪ್ರಧಾನಮಂತ್ರಿಯವರನ್ನು ಒತ್ತಾಯಿಸಿದರು.
(ದಟ್ಸ್ ಕನ್ನಡ ವಾರ್ತೆ)
ಶಂಕಿತ ಅಹ್ಮದ್ ಬಾಬಾ ಮುಜಾಹಿದೀನ್ ಸದಸ್ಯ
ಉಲ್ಲಾಳ ಬಳಿ 11 ಶಂಕಿತ ವ್ಯಕ್ತಿಗಳ ಬಂಧನ
ಚರ್ಚ್ ದಾಳಿ ಸರ್ಕಾರದ ಕ್ರಮಕ್ಕೆ ಕೇಂದ್ರ ತೃಪ್ತಿ
ಗುಪ್ತಚರ ಇಲಾಖೆ ಬಲವರ್ಧನೆ :ಯಡಿಯೂರಪ್ಪ












Click it and Unblock the Notifications