ಚರ್ಚ್ ಮೇಲೆ ದಾಳಿ : ಪೊಲೀಸರ ಬೆವರಿಳಿಸಿದ ಸಿಎಂ
ಬೆಂಗಳೂರು, ಸೆ. 21 : ನಗರದಲ್ಲಿಂದು ನಡೆದಿರುವ ಚರ್ಚ್ ದಾಳಿಗೆ ಪೊಲೀಸರೇ ಹೊಣೆಗಾರರು. ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ. ಮರಿಯಣ್ಣನಪಾಳ್ಯ ಹಾಗೂ ರಾಜರಾಜೇಶ್ವರಿ ನಗರದ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಚರ್ಚ್ ದಾಳಿಯ ನಂತರ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಪೊಲೀಸ್ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ ಚರ್ಚ್ ಮೇಲೆ ದಾಳಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು. ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದಲ್ಲಿ, ಆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಭಾನುವಾರ ನಗರದ ಚರ್ಚ್ ಮೇಲೆ ದಾಳಿ ನಡೆದಿದ್ದರಿಂದ ಸರ್ಕಾರ ತೀವ್ರ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಚರ್ಚ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹಸಚಿವ ವಿ.ಎಸ್. ಆಚಾರ್ಯ ಅವರ ಮೇಲೆ ಮುಗಿಬಿದ್ದಿದ್ದಾರೆ.
ಗೃಹ ಸಚಿವ ನಾಲಾಯಕ್ : ಸಿದ್ದು
ಬೆಂಗಳೂರಿನ ಚರ್ಚ್ ಮೇಲೆ ನಡೆದಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ವಿ.ಎಸ್.ಆಚಾರ್ಯ ಕರ್ನಾಟಕ ರಾಜಕೀಯ ಇತಿಹಾಸ ಕಂಡ ಅತ್ಯಂತ ಬೇಜವಾಬ್ದಾರಿ, ಅಸಮರ್ಥ ಹಾಗೂ ನಾಲಾಯಕ್ ಗೃಹ ಸಚಿವ ಎಂದು ಲೇವಡಿ ಮಾಡಿದ್ದಾರೆ. ರಾಜ್ಯದಲ್ಲಾಗುತ್ತಿರುವ ಚರ್ಚ್ ಗಳ ಮೇಲಿನ ದಾಳಿ ಖಂಡಿಸಿ ಮೈಸೂರಿನಲ್ಲಿ ಮೌನ ಪ್ರತಿಭಟನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾಡನಾಡಿದ ಅವರು, ಗೃಹ ಸಚಿವ ವಿ.ಎಸ್.ಆಚಾರ್ಯ ಅವರಿಗೆ ಒಂದು ನಿಮಿಷ ಸಚಿವ ಹುದ್ದೆಯಲ್ಲಿ ಮುಂದುವರೆಯಲು ನೈತಿಕ ಹಕ್ಕಿಲ್ಲ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮಂಗಳೂರು ಗಲಭೆ, ಪದ್ಮಪ್ರಿಯಾ ಘಟನೆ ಹೀಗೆ ಪ್ರತಿಯೂಂದರಲ್ಲಿ ಆಚಾರ್ಯ ಬೇಜಾವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಬೇಜವಾಬ್ದಾರಿ : ಕುಮಾರಸ್ವಾಮಿ
ಯಡಿಯೂರಪ್ಪ ಬೇಜವಾಬ್ದಾರಿ ಸಿಎಂ ನಂ. 1 ಎಂದು ಚರ್ಚ್ ಮೇಲಾಗುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಯಡಿಯೂರಪ್ಪನವರನ್ನು ಟೀಕಿಸಿದ್ದಾರೆ. ಕರ್ನಾಟಕದಲ್ಲಿ ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಯಾವುದೇ ರಕ್ಷಣೆ ಸಿಗುತ್ತಿಲ್ಲ. ಚರ್ಚ್ ಮೇಲಿನ ದಾಳಿ, ಗೊಬ್ಬರ ವಿಷಯದಲ್ಲಿ ರೈತರ ಮೇಲಾದ ಗೋಲಿಬಾರ್, ಪದ್ಮಪ್ರಿಯಾ ಪ್ರಕರಣಗಳೇ ಬಿಜೆಪಿ ಸರ್ಕಾರದ ಅದಕ್ಷತೆಗೆ ನಿದರ್ಶನ ಎಂದು ಅವರು ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತುಂಬಾ ಹದಗೆಟ್ಟಿದೆ, ಇದೇ ನೂರಾಹತ್ತು ದಿನಗಳ ಸರ್ಕಾರದ ಸಾಧನೆ ಎಂದು ಅವರು ಲೇವಡಿ ಮಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಕಾಣದ ಕೈಗಳ ವ್ಯವಸ್ಥಿತ ಸಂಚು : ಯಡಿಯೂರಪ್ಪ ಆರೋಪ












Click it and Unblock the Notifications