ದಿಲ್ಲಿ ಸ್ಫೋಟ : ಸಂಚಿನ ರುವಾರಿ ತಂತ್ರಜ್ಞ ತಾಖೀರ್?
ನವದೆಹಲಿ, ಸೆ. 14 : ಶನಿವಾರ ಸಂಜೆ ರಾಜಧಾನಿ ದೆಹಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ಸಾಫ್ಟ್ ವೇರ್ ಇಂಜಿನಿಯರ್ ಅಬ್ದುಲ್ ಸುಭಾನಿ ಖುರೇಶಿ ಅಲಿಯಾಸ್ ತಾಖೀರ್ ಎಂದು ಮುಂಬೈ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮುಂಬೈ ನಗರದ ಮೀರಾ ನಗರದ ನಯಾಗರ ಬಡಾವಣೆಯ ನಿವಾಸಿ ಅಬ್ದುಲ್ ಸುಭಾನಿ ಖುರೇಶಿ ಸ್ಫೋಟ ನಡೆದ ನಂತರ ನಾಪತ್ತೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಖುರೇಶಿಯು ದೇಶದ ಮೂರು ಪ್ರತಿಷ್ಠಿತ ಸಾಫ್ಟ್ ವೇರ್ ಕಂಪೆನಿಗಳಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದಾನೆ. ಹಾಗೂ ವಿಪ್ರೋ ಟೆಕ್ನಾಲಜಿಯ ಸೇಲ್ಸ್ ವಿಭಾಗದಲ್ಲಿ ಕೆಲ ವರ್ಷ ಕೆಲಸ ಮಾಡಿದ್ದಾನೆ. ಆದರೆ 1998ರಲ್ಲಿ ಕೆಲಸವನ್ನು ತೊರೆದು ನಿಷೇಧಿತ ಸಂಘಟನೆ ಸಿಮಿಯನ್ನು ಸೇರಿಕೊಂಡು ದುಷ್ಕ್ರತ್ಯದಲ್ಲಿ ತೊಡಗಿದ್ದು, ಇತ್ತೀಚೆಗೆ ದೇಶದಲ್ಲಿ ನಡೆದ ಅನೇಕ ಸ್ಫೋಟಗಳಲ್ಲಿ ಈತನ ಕೈವಾಡವಿದೆ ಎನ್ನಲಾಗಿದೆ.
ಮುಂಬೈನಿಂದ ಮಾಧ್ಯಮಗಳಿಗೆ ರವಾನಿಸಲಾಗಿರುವ ಈಮೇಲ್ ಕೂಡಾ ಖುರೇಶಿ ಕೈಚಳಕದಿಂದಲೇ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ದೇಶ ದ್ರೋಹ ಕೃತ್ಯದಲ್ಲಿ ತೊಡಗಿರುವ ಖುರೇಶಿ 2001 ರಿಂದ ಕುಟುಂಬ ಸಂಪರ್ಕವನ್ನು ಕಡಿದುಕೊಂಡಿದ್ದಾನೆ ಎಂದು ಆತನ ಕುಟುಂಬ ಮೂಲಗಳು ತಿಳಿಸಿವೆ. 2006ರಲ್ಲಿ ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದಾನೆ. ನಿಷೇಧಿತ ಸಿಮಿ ಸಂಘಟನೆಯ ಮುಖ್ಯಸ್ಥ ಸಫ್ದಾರ್ ನಾಗೋರಿಯ ನಿಕಟವರ್ತಿಯಾಗಿರುವ ಖುರೇಶಿ ಉತ್ತಮ ತಂತ್ರಜ್ಞನಾಗಿದ್ದು, ಮುಂಬೈನಲ್ಲಿ ನಡೆದ ಟ್ರೇನ್ ಸ್ಫೋಟದ ಕೃತ್ಯದಲ್ಲಿ ಸಕ್ರಿಯ ಪಾತ್ರವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ದಿಲ್ಲಿ ಸ್ಫೋಟ : 10 ಶಂಕಿತ ವ್ಯಕ್ತಿಗಳ ವಿಚಾರಣೆ