ನಗರದಲ್ಲಿ ಚೀನೀಯರಿಗೆ ಇಂಗ್ಲಿಷ್ ಬೋಧನೆ
ಬೆಂಗಳೂರು, ಸೆ. 14: ಅದೊಂದು ಅಪೂರ್ವ ಕಾರ್ಯಕ್ರಮ. ದಯಾನಂದ ಸಾಗರ್ ಶಿಕ್ಷಣ ಸಮೂಹದ ಕ್ಯಾಂಪಸ್ನಲ್ಲಿ ಚೀನೀ ವಿದ್ಯಾರ್ಥಿಗಳ ಕಲರವ. ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಬಾರಿಗೆ ಒಂದೇ ದಿನ 72 ವಿದ್ಯಾರ್ಥಿಗಳ ಪ್ರವೇಶದ ಸಂದರ್ಭ. ಅಲ್ಲಿ ಭಾರತೀಯ ಸಂಪ್ರದಾಯದಂತೆ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ಘಮಘಮಿಸುವ ಮಲ್ಲಿಗೆ ಮಾಲೆ ಹಾಕಿ ತಿಲಕವಿಟ್ಟು ಸ್ವಾಗತಿಸಿದಾಗ ಚೀನಿ ವಿದ್ಯಾರ್ಥಿಗಳಿಗೆ ವಿಶಿಷ್ಟ ಅನುಭವ.
ಬೆಂಗಳೂರನ್ನು ಚೀನೀಯರ ಕಲಿಕಾ ಕೇಂದ್ರವನ್ನಾಗಿಸುವಲ್ಲಿ ದಯಾನಂದ ಸಾಗರ್ ಶಿಕ್ಷಣ ಸಂಸ್ಥೆಯು ಇಂದು ಮತ್ತೊಂದು ಮಹತ್ವದ ಹೆಜ್ಜೆಯನ್ನಿರಿಸಿತು. ವಿಶ್ವ ವ್ಯವಹಾರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಮರ್ಥ್ಯವಿರುವ ಚೀನಾ ದೇಶವು ತನ್ನ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯ ಜ್ಞಾನ ಒದಗಿಸುವ ಧಾವಂತದಲ್ಲಿದ್ದು, ಅದಕ್ಕಾಗಿ ಬೆಂಗಳೂರಿನ ಈ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದೆ.
ಚೀನಾ ದೇಶದ ಹಲವು ಪ್ರಾಂತ್ಯದಿಂದ ಬಂದಿರುವ 72 ವಿದ್ಯಾರ್ಥಿಗಳು ಬುಧವಾರದಂದು (ಸೆ.13) ಸಂಸ್ಥೆಯಲ್ಲಿ ದಾಖಲಾತಿ ಪೂರೈಸಿದರು. ಈ ವಿದ್ಯಾರ್ಥಿಗಳು ಸಂಸ್ಥೆಯ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳಿಗಾಗಿ ಇರುವ ಕೇಂದ್ರ(ಡಿಎಸ್ಐ)ದಲ್ಲಿ ಇಂಗ್ಲಿಷ್ ಭಾಷೆಯ ಮೂಲ ರಚನೆಯನ್ನು ಕುರಿತು ಒಂದು ವರ್ಷ ಅವಧಿಯಲ್ಲಿ ಅಧ್ಯಯನ ಮಾಡಲಿದ್ದಾರೆ.
ಮುಂದಿನ ವಾರದಲ್ಲಿ ಹೆಚ್ಚುವರಿಯಾಗಿ 35 ಚೀನಿ ವಿದ್ಯಾರ್ಥಿಗಳು ಈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಚೀನಾದಲ್ಲಿ ಭಾರತದ 10+2ಗೆ ಸಮನಾದ ಪ್ರೌಢಶಾಲಾ ಶಿಕ್ಷಣವನ್ನು ಪಡೆದಿರುವ ಈ ವಿದ್ಯಾರ್ಥಿಗಳು ಪದವಿ ತರಗತಿಗಳಿಗೆ ಸೇರಲು ಉತ್ಸುಕರಾಗಿದ್ದಾರೆ. ಈ ವಿದ್ಯಾರ್ಥಿಗಳೂ ಮಾಹಿತಿ ತಂತ್ರಜ್ಞಾನ ಮತ್ತು ನಿರ್ವಹಣಾ ಕೋರ್ಸುಗಳನ್ನು ಅಧ್ಯಯನ ಮಾಡುವ ಉದ್ದೇಶ ಹೊಂದಿದವರಾಗಿದ್ದು, ಕೆಲವರು ಇಂಜಿನಿಯರಿಂಗ್ ಶಿಕ್ಷಣವನ್ನೂ ಓರ್ವ ವಿದ್ಯಾರ್ಥಿ ಪತ್ರಿಕೋದ್ಯಮ ಅಧ್ಯಯನ ಬಯಸಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೂ ಕ್ಯಾಂಪಸ್ಸಿನ ಅಂತಾರಾಷ್ಟ್ರೀಯ ಮಟ್ಟದ ವಿದ್ಯಾರ್ಥಿನಿಲಯಗಳಲ್ಲಿ ವಸತಿ ಒದಗಿಸಿಕೊಡಲಾಗಿದೆ.
2007-08ನೇ ಸಾಲಿನಲ್ಲಿ ಸೌದಿ ಅರೇಬಿಯಾದ 60 ವಿದ್ಯಾರ್ಥಿಗಳು, ಥಾಯ್ಲ್ಯಾಂಡ್ನಿಂದ 45, ಕೋರಿಯಾದಿಂದ 11, ಇರಾನ್ ಮತ್ತು ಇರಾಕ್ನಿಂದ ತಲಾ 15 ವಿದ್ಯಾರ್ಥಿಗಳು ಆಗಮಿಸಿ ನಮ್ಮ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ಕೇಂದ್ರದಲ್ಲಿ ಅಧ್ಯಯನ ಮಾಡಿದ್ದಾರೆ.
ದಯಾನಂದ ಸಾಗರ್ ಶಿಕ್ಷಣ ಸಂಸ್ಥೆಯು 29 ಎಕರೆಯಷ್ಟು ವಿಶಾಲ ಸ್ಥಳಾವಕಾಶದಲ್ಲಿ ಹರಡಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಸಮಗ್ರ ವ್ಯವಸ್ಥೆ ಒದಗಿಸುವ ಮತ್ತು ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದೆ. ನಗರದಲ್ಲಿ ಸಂಪರ್ಕ-ಪ್ರಯಾಣಕ್ಕೆ ಅತ್ಯಂತ ಸುಲಭವಾದ ಸ್ಥಳದಲ್ಲಿರುವ ಸಂಸ್ಥೆಯು ವಿದ್ಯಾರ್ಥಿಗಳ ಮತ್ತು ಪೋಷಕರ ಆಶಯ-ಅಗತ್ಯಗಳಿಗೆ ಉತ್ತಮವಾಗಿ ಸ್ಪಂದಿಸಲು ಸಹಕಾರಿಯಾಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ದಯಾನಂದ ಸಾಗರ ಶಿಕ್ಷಣ ಸಂಸ್ಥೆಯ ಬಗ್ಗೆ ಮೆಚ್ಚುಗೆ ಹೊಂದಿದ್ದು ಜನಪ್ರಿಯತೆಯೂ ವರ್ಷಾನುವರ್ಷ ವೃದ್ಧಿಯಾಗುತ್ತಿದೆ ಎಂದು ಹಿರಿಯ ಕಾರ್ಯನಿರತ ಉಪಾಧ್ಯಕ್ಷರಾದ ಆರ್. ಜನಾರ್ದನ್ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)