ರಾಷ್ಟ್ರರಾಜಧಾನಿಯನ್ನು ತಲ್ಲಣಿಸಿದ ಸರಣಿ ಸ್ಫೋಟ
ನವದೆಹಲಿ, ಸೆ. 13 : ನಗರದ ನಾಲ್ಕು ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ ಶನಿವಾರ ಸಂಜೆ ಐದು ಸರಣಿ ಸ್ಫೋಟಗಳು ಸಂಭವಿಸಿದ್ದು 10ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದು, ರಾಷ್ಟ್ರದ ರಾಜಧಾನಿಯನ್ನು ಭಯೋತ್ಪಾದನೆಯ ನೆರಳು ಆವರಿಸಿಕೊಂಡಿದೆ.
ಜುಲೈ 25ರಂದು ಬೆಂಗಳೂರು ಮತ್ತು ಜುಲೈ 26ರಂದು ಅಹ್ಮದಾಬಾದನ್ನು ಗುರಿಯಾಗಿಟ್ಟುಕೊಂಡು ಬಾಂಬ್ ಸ್ಫೋಟ ನಡೆಸಿದ್ದ ಭಯೋತ್ಪಾದಕರು ಈಗ ನವದೆಹಲಿಯನ್ನು ಆರಿಸಿಕೊಂಡಿದ್ದಾರೆ. ಶನಿವಾರ ಸಂಜೆ 6.15ಕ್ಕೆ ಮೊದಲ ಬಾಂಬ್ ಸ್ಫೋಟಗೊಂಡಿದೆ. ಮುಂದಿನ 45 ನಿಮಿಷಗಳಲ್ಲಿ ಇನ್ನೂ ನಾಲ್ಕು ಸ್ಫೋಟಗಳು ಸಂಭವಿಸಿವೆ.
ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಈ ಸ್ಫೋಟಗಳ ಹೊಣೆಯನ್ನು ಹೊತ್ತುಕೊಂಡಿದೆ. ಸ್ಫೋಟಕ್ಕೂ ಮೊದಲು ಕೆಲ ಟಿವಿ ಚಾನಲ್ ಗಳಿಗೆ ಸ್ಫೋಟ ನಡೆಸುವುದಾಗಿ ಈಮೇಲನ್ನು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಕಳಿಸಿತ್ತೆಂದು ತಿಳಿದುಬಂದಿದೆ.
ಮೊದಲ ಸ್ಫೋಟ ಸಂಜೆ 6.15ಕ್ಕೆ ಕನಾಟ್ ಪ್ಲೇಸ್ ನಲ್ಲಿ ಸಂಭವಿಸಿದೆ. ನಂತರದ 50 ನಿಮಿಷಗಳಲ್ಲಿ ಕರೋಲ್ ಭಾಗ್, ಗ್ರೇಟರ್ ಕೈಲಾಶ್, ಪಾಲಿಕಾ ಬಜಾರ್ ನಲ್ಲಿ ಮುಂದಿನ ಮೂರು ಸ್ಫೋಟಗಳು ಸಂಭವಿಸಿವೆ. ಗ್ರೇಟರ್ ಕೈಲಾಶ್ ನಲ್ಲಿ ಐದನೆಯ ಸ್ಫೋಟ ಸಂಭವಿಸಿದೆ. ಕರೋಲ್ ಭಾಗ್ ನಲ್ಲಿ ಆಟೋದಲ್ಲಿ ಸ್ಫೋಟಕವನ್ನು ಇರಿಸಲಾಗಿತ್ತು. ಸ್ಫೋಟಗಳಲ್ಲಿ 80ಕ್ಕೂ ಹೆಚ್ಚಿನ ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಲಿಕಾ ಬಜಾರ್ ನಲ್ಲಿಯೇ 20 ಜನ ಗಾಯಗೊಂಡಿದ್ದಾರೆ. ತೀವ್ರ ತಲ್ಲಣಕ್ಕೊಳಗಾದ ಸಾರ್ವಜನಿಕರು ಪ್ರಾಣ ಉಳಿಸಿಕೊಳ್ಳಲು ಎಲ್ಲೆಂದರಲ್ಲಿ ಓಡುತ್ತಿದ್ದ ದೃಶ್ಯ ಕಂಡುಬಂದಿದೆ. ಸ್ಫೋಟಗೊಂಡ ಸ್ಥಳದಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದು ರಸ್ತೆಯ ತುಂಬೆಲ್ಲಾ ಸಾವಿಗೀಡಾದ, ಗಾಯಗೊಂಡ ಜನತೆ ಬಿದ್ದಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಕಟ್ಟೆಚ್ಚರ : ನವದೆಹಲಿಯಲ್ಲಿ ಇಂದು ನಡೆದ ಸರಣಿ ಸ್ಫೋಟಗಳ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಷ್ಟ್ರದ ಎಲ್ಲ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಸ್, ವಿಮಾನ, ರೈಲು ನಿಲ್ದಾಣ, ಶಾಪಿಂಗ್ ಮಾಲ್ ಮುಂತಾದ ಬೆಂಗಳೂರಿನ ಎಲ್ಲ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಬಸವನಗುಡಿಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿರುವ ಸ್ಥಳದಲ್ಲಿ ಲಕ್ಷಾಂತರ ಜನ ಜಮಾಯಿಸಿರುವುದರಿಂದ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಹೇಳಿದ್ದಾರೆ. ಸಾರ್ವಜನಿಕರು ಗಾಬರಿ ಬೀಳುವ ಅವಶ್ಯಕತೆಯಿಲ್ಲ ಎಂದು ಅಭಯ ನೀಡಿದ್ದಾರೆ.
(ಯುಎನ್ಐ)












Click it and Unblock the Notifications