ಬಿಜೆಪಿ ನೂರರ ಸಂಭ್ರಮಕ್ಕೆ ವಿಧಾನಸೌಧ ಸಿಂಗಾರ
ಬೆಂಗಳೂರು, ಸೆ. 9 : ಶತಕ ಸಂಭ್ರಮದಲ್ಲಿರುವ ಬಿಜೆಪಿ ಮಂಗಳವಾರ ಜನತೆಗೆ ಇನ್ನಷ್ಟು ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಕೆಲ ಯೋಜನೆಗಳ ಅನುಷ್ಠಾನದ ಬಾಗಿನ ಅರ್ಪಿಸುವ ಸಿದ್ಧತೆಯಲ್ಲಿದ್ದಾರೆ.
ಐದು ವರ್ಷ ಆಡಳಿತ ನಡೆಸಲು ಆಯ್ಕೆಯಾದ ಸರ್ಕಾರಕ್ಕೆ ತುಂಬಿದ 'ನೂರು ದಿನ'ದ ಸಾಧನೆ ಸಾಬೀತುಪಡಿಸುವಂಥ ಕಾಲವೇನೂ ಅಲ್ಲ, ಆದರೆ ಸರ್ಕಾರ ಮುಂದೆ ಕ್ರಮಿಸುವ ಹಾದಿಯ ದಿಕ್ಸೂಚಿಯಂತೂ ಹೌದು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ತೀವ್ರ ಟೀಕೆ ಹಿನ್ನೆಲೆಯಲ್ಲಿ ಶತಕದ ಸಂಭ್ರಮವನ್ನು ಸರಳ ರೀತಿಯಲ್ಲಿ ಆಚರಿಸಿಕೊಳ್ಳಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ನೂರು ದಿನ ಆಡಳಿತ ನಡೆಸಿದ ಸರ್ಕಾರ ಕಾರ್ಯಕ್ರಮಗಳ ಅವಲೋಕನ ಹಾಗೂ ಮುಂದೆ ಸಾಗಬೇಕಿರುವ ಬಗ್ಗೆ ಇಂದು ಜನತೆಯ ಮುಂದೆ ಇಡಲಿದ್ದಾರೆ. ಇದಕ್ಕಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬೆಳಗ್ಗೆ 10.30ಕ್ಕೆ ಸರಳ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಯಡಿಯೂರಪ್ಪ ಚೆಕ್ ವಿತರಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯ ಆವರಣದಲ್ಲಿರುವ ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಕಾರ್ಯಕ್ರಮ ನಡೆಸಲಿದೆ. ಪ್ರತಿ ಜಿಲ್ಲೆಯಲ್ಲೂ ಸರ್ಕಾರ ಶತದಿನ ಪೂರೈಸಿದ ಸಂಭ್ರಮದಆಚರಣೆ ನಡೆಯಲಿದೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರ ಕೈಗೊಳ್ಳಲಿರುವ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ.
(ದಟ್ಸ್ ಕನ್ನಡ ವಾರ್ತೆ)