'ಯಡಿಯೂರಪ್ಪ ನಾಟಕ ಮಂಡಳಿಗೆ ನೂರು ದಿನ'
ಬೆಂಗಳೂರು, ಸೆ.8: ಮುಖ್ಯಮಂತ್ರಿ ಯಡಿಯೂರಪ್ಪ ಕೃಪಾ ಪೋಷಿತ ನಾಟಕ ಮಂಡಳಿ ಮಂಗಳವಾರ 100ನೆಯ ಪ್ರದರ್ಶನ ನೀಡುತ್ತಿದ್ದು, ಸಾಧನೆ ಮಾತ್ರ ಶೂನ್ಯ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಬೆಂಗಳೂರಿನಲ್ಲಿ ಸೋಮವಾರ ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಯಡಿಯೂರಪ್ಪ ಅವರ ವೈಯಕ್ತಿಕ ಗಳಿಕೆ ಹೆಚ್ಚಾಗಿದೆ. ರಾಜ್ಯದ ಅಭಿವೃದ್ಧಿ ಮಾಡಲು ಸಾಧ್ಯವಾಗದಿದ್ದರೆ ಅಧಿಕಾರ ತ್ಯಜಿಸಿ ಎಂದು ಆಗ್ರಹಿಸಿದ್ದಾರೆ. ಈ ನಾಟಕ ಮಂಡಳಿಯ ನಿರ್ದೇಶಕರು, ಸಹ ನಿರ್ದೇಶಕರು ಬಳ್ಳಾರಿಯವರಾಗಿದ್ದು, ಯಡಿಯೂರಪ್ಪ ಅವರು ನಟ ಭಯಂಕರರಾಗಿ ನಟಿಸಿದ್ದಾರೆ ಎಂದು ಲೇವಡಿ ಮಾಡಿದರು.
ಯಡಿಯೂರಪ್ಪ 100 ದಿನ ಪೂರೈಸಲು ವಿಧಾನಸೌಧದಿಂದ ಪಟ್ಟಣ ಪಂಚಾಯಿತಿವರೆಗೂ ಕಾಲಹರಣ ಮಾಡಿದ್ದಾರೆ. ಮಠ ಮಾನ್ಯಗಳಿಗೆ ಭೇಟಿ ಕೊಟ್ಟು ಪಾಪ ಪರಿಹಾರ ಮಾಡಿಕೊಂಡಿದ್ದಾರೆ. ತಮ್ಮ ಮೋಜಿಗಾಗಿ ಕಾಲಹರಣ ಮಾಡಿದ್ದಾರೆ ಎಂದು ಟೀಕಿಸಿದರು. ಅವರಿಗೆ ಮಹಿಳೆಯರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡದ ರಕ್ಷಣೆ ಇಲ್ಲ ಎಂದು ಉಗ್ರಪ್ಪ ಕೆಂಡಾ ಮಂಡಲವಾದರು.
ವರ್ಗಾವಣೆ ದಂಧೆಯಲ್ಲಿ ಸಾವಿರಾರು ಕೋಟಿ ರು.ಗಳನ್ನು ಗಳಿಸಿದ್ದಾರೆ. ರಾಜ್ಯದಲ್ಲಿ ನೆರೆ ಬರದ ಪರಿಸ್ಥಿತಿ ತಲೆದೋರಿ ಜನತೆ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಅಕ್ಕ ಸಮ್ಮೇಳನದ ಹೆಸರಲ್ಲಿ 66 ಮಂದಿ ಶಾಸಕರನ್ನ್ನು ಅಮೆರಿಕಾಗೆ ಕರೆದೊಯ್ದು ಅಲ್ಲಿ ಮೋಜು ಮಾಡಿಕೊಂಡು ಬಂದಿದ್ದಾರೆ. ಅಪರಾಧಿ ಹಿನ್ನೆಯ 10 ಮಂದಿ ಶಾಸಕರು ಅವರ ಪಾಳೆಯದಲ್ಲಿದ್ದಾರೆ. ನಾಡಿನ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮ ಇಲ್ಲ. ಆದರೆ ಪಕ್ಷದ ಅಭಿವೃದ್ಧಿಯ ಹೆಸರಲ್ಲಿ ಆಪರೇಷನ್ ಕಮಲ ಮಾಡಲಾಗುತ್ತಿದೆ. ಇದೊಂದು ಹಿಟ್ಲರ್ ಧೋರಣೆ ಎಂದರು ಉಗ್ರಪ್ಪ ಉಗ್ರವಾಗಿ ಟೀಕಿಸಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಬಿಜೆಪಿ
ಸರ್ಕಾರದ
ವೈಫಲ್ಯ
ಜೆಡಿಎಸ್
ಪ್ರತಿಭಟನೆ