ಮೂಲಕ್ಕೆ ಕೊಡಲಿ, ರಾಜ್ಯ ಕಾಂಗೈಗಳ ಸಿಡಿಮಿಡಿ
ಬೆಂಗಳೂರು, ಸೆ.1 : ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆ ಕುರಿತು ಹೈಕಮಾಂಡ್ ಆದೇಶದ ಮೇಲೆ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ದೆಹಲಿಗೆ ತೆರಳಿರುವ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಭಾನುವಾರಸಭೆ ಸೇರಿ ಮೂಲ ಕಾಂಗ್ರೆಸ್ಸಿಗರಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ವರಿಷ್ಠರನ್ನು ಒತ್ತಾಯಿಸಿದ್ದಾರೆ.
ನಗರದ ಪಂಚತಾರ ಹೋಟೆಲ್ ನಲ್ಲಿ ಸಭೆ ನಡೆಸಿದ ಮಾಜಿ ಮುಖ್ಯಮಂತ್ರಿ ಧರಂಸಿಂಗ್, ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್, ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ನೇತೃತ್ವದಲ್ಲಿ ಅನೇಕ ಕಾಂಗ್ರೆಸ್ ಮುಖಂಡರು ಮೂಲ ಕಾಂಗ್ರೆಸ್ಸಿಗರಿಗೆ ಅಧ್ಯಕ್ಷ ಪದವಿ ನೀಡಬೇಕೆನ್ನುವ ಕುರಿತು ಹೈಕಮಾಂಡ್ ಮೇಲೆ ಯಾವ ರೀತಿ ತಂತ್ರ ಹೇರಬೇಕು ಎನ್ನುವುದನ್ನು ಚರ್ಚಿಸಿದರು.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಮೂಲ ಕಾಂಗ್ರೆಸ್ಸಿಗರಿಗೆ ನೀಡಬೇಕು. ಯಾವುದೇ ಕಾರಣಕ್ಕೂ ವಲಸಿಗರಿಗೆ ಅಧ್ಯಕ್ಷ ಪಟ್ಟವನ್ನು ನೀಡಬಾರದು ಎನ್ನುವುದು ಸಭೆಯಲ್ಲಿ ಬಲವಾಗಿ ಕೇಳಿ ಬಂದಿತು. ಕಳೆದ ಹಲವು ದಿನಗಳಿಂದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಹಾಗೂ ಡಿ.ಬಿ.ಚಂದ್ರೇಗೌಡ ಅವರ ಹೆಸರು ಕೇಳಿ ಬಂದಿತ್ತು. ಅವರೂ ಕೂಡಾ ಅಧ್ಯಕ್ಷರಾಗಲು ಲಾಬಿ ನಡೆಸಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ದಿಲ್ಲಿಯಿಂದ ಸಿದ್ದುಗೆ ಬುಲಾವ್ ಬಂದಿರುವುದು ಭಾರಿ ಕುತೂಹಲಕ್ಕೆ ಎಡೆಮಾಡಿದೆ.
ಕಾಂಗ್ರೆಸ್ಸಿನ ಅತೃಪ್ತಿ ನಾಯಕ ಸಿದ್ದರಾಮಯ್ಯ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲ ಎಂದು ಇತ್ತೀಚೆಗೆ ತಮ್ಮ ಆಪ್ತ ಶಾಸಕರೊಡನೆ ಗೋವಾ ರೆಸಾರ್ಟ್ ವೊಂದರಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದ್ದರು. ಶೀಘ್ರದಲ್ಲಿ ಕಾಂಗ್ರೆಸ್ ನಲ್ಲಿ ಸ್ಥಾನಮಾನ ದೊರೆಯದಿದ್ದಲ್ಲಿ ಅನ್ಯ ದಾರಿಯ ಕುರಿತು ಚರ್ಚೆಸಿದ್ದರು. ಈ ಎಲ್ಲ ಬೆಳವಣಿಗೆಯನ್ನು ಮನಗಂಡಿರುವ ಕಾಂಗ್ರೆಸ್ ವರಿಷ್ಠರು ಸಿದ್ದುಗೆ ಪಟ್ಟಕಟ್ಟಲು ತಯಾರಿ ನಡೆಸಿದ್ದಾರೆ. ಆದರೆ ಸಿದ್ದು ದೆಹಲಿಗೆ ತೆರಳಿದ ಬೆನ್ನಲ್ಲೇ ಪಕ್ಷದ ಮೂಲ ಕಾಂಗ್ರೆಸ್ ಮುಖಂಡರು ಸಭೆ ಸೇರಿ ಚರ್ಚೆ ಅರಂಭಿಸಿರುವುದು ಮತ್ತೆ ಸಿದ್ದುಗೆ ಹಿನ್ನೆಡೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಮುಂಬರುವ ಲೋಕಸಭೆ ಚುನಾವಣೆ ಹಾಗೂ ಉಪಚುನಾವಣೆಗೆ ಪಕ್ಷಕ್ಕೆ ಸೂಕ್ತ ದಂಡನಾಯಕನ ಅವಶ್ಯಕತೆ ಇದೆ. ಆಡಳಿತ ಬಿಜೆಪಿ ಸರ್ಕಾರವನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಮಯ್ಯ ಸೂಕ್ತ ಎನ್ನುವ ವಿಷಯ ವರಿಷ್ಠರಿಗೆ ಗೊತ್ತಿದೆ. ಅದಕ್ಕಾಗಿ ವರಿಷ್ಠರು ಅದ್ಯಕ್ಷರನ್ನಾಗಿಸಲು ಉತ್ಸುಕವಾಗಿದೆ. ಸ್ಥಳೀಯ ನಾಯಕರು ಸಿದ್ದುಗೆ ಅಡ್ಡಗಾಲಾಗಿದ್ದಾರೆ. ಈ ಸಲ ಸಿದ್ದರಾಮಯ್ಯ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ದೊರೆಯದಿದ್ದಲ್ಲಿ ಪಕ್ಷಕ್ಕೆ ಗುಡಬೈ ಹೇಳಿಕೆ ನಿಕ್ಕಿಯಾಗಿದೆ. ಶೋಚನೀಯ ಸ್ಥಿತಿಯಲ್ಲಿರುವ ಕಾಂಗ್ರೆಸ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವುದರಲ್ಲಿ ಎರಡು ಮಾತಿಲ್ಲ.
(ದಟ್ಸ್ ಕನ್ನಡ ವಾರ್ತೆ)
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸಿದ್ದು?