ಅಕ್ಕನ ಸನ್ನಿಧಿಗೆ ಹಾರಿದ ಯಡಿಯೂರಪ್ಪ ಪರಿವಾರ
ಬೆಂಗಳೂರು, ಆ. 28 : ಅಮೆರಿಕದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗ್ಗೆ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಚಿಕಾಗೋ ನಗರಕ್ಕೆ ತೆರಳಿದರು. ಸಚಿವರಾದ ವಿ.ಎಸ್.ಆಚಾರ್ಯ, ಬಸವರಾಜ ಬೊಮ್ಮಾಯಿ, ಹರತಾಳ್ ಹಾಲಪ್ಪ, ವೆಂಕಟರಮಣಪ್ಪ, ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ, ರಾಘವೇಂದ್ರ ಹಾಗೂ ಪುತ್ರಿಯರು ಮುಖ್ಯಮಂತ್ರಿಯವರಿಗೆ ಶುಭ ಹಾರೈಸಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಂಡು ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸುವುದರ ಜೊತೆಗೆ ರಾಜ್ಯದ ಬೌದ್ಧಿಕ ಶಕ್ತಿ ಮತ್ತೆ ರಾಜ್ಯಕ್ಕೆ ಮರಳಲು ಮನವೊಲಿಸಲಾಗುವುದು ಎಂದು ಹೇಳಿದರು. ಮುಖ್ಯವಾಗಿ ಚಿಕಾಗೋ ನಗರದಲ್ಲಿ ಭಾರತ ಮೇರು ಸಾಧಕ ಸ್ವಾಮಿ ವಿವೇಕಾನಂದರು ಚಿಕಾಗೋ ನಗರದಲ್ಲಿ ಏರ್ಪಡಿಸಲಾಗಿದ್ದ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು. ಅದೇ ಮಾದರಿ ಚಿಕಾಗೋ ನಗರದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ ಕನ್ನಡವನ್ನು ಪ್ರತಿಪಾದಿಸಲಾಗುವುದು ಎಂದು ಹೇಳಿದರು.
ಯಡಿಯೂರಪ್ಪ ಅವರ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿ ಅಕ್ಕ ಸಮಾವೇಶದ ಜೊತೆಗೆ ಬಂಡವಾಳ ಹೂಡಿಕೆದಾರರ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯ ವಿದೇಶಿ ಬಂಡಾವಾಳ ಹರಿದು ಬರಲು ಎಲ್ಲ ಪ್ರಯತ್ನ ನಡೆಸಲಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರು ಕೈಗಾರಿಕೆ ವಿರೋಧಿಯಲ್ಲಿ ಎನ್ನುವುದನ್ನು ಸಾಬೀತುಪಡಿಸಲಿದ್ದಾರೆ.
ಈ ಮೂಲಕ ಅಕ್ಕ ಸಮ್ಮೇಳನಕ್ಕೆ ಪ್ರಥಮ ಬಾರಿಗೆ ಮುಖ್ಯಮಂತ್ರಿಯೊಬ್ಬರು ಭಾಗವಹಿಸಿದಂತಾಯಿತು. ಯಡಿಯೂರಪ್ಪ ಅವರೊಂದಿಗೆ ಅಧಿಕಾರಿಗಳು ದಂಡು, ಸಿಬ್ಬಂದಿ ವರ್ಗ ಇಂದು ಅಮೆರಿಕಕ್ಕೆ ತೆರಳಿತು. ಸಚಿವ ಜನಾರ್ದನರೆಡ್ಡಿ, ಶ್ರೀರಾಮುಲು ಅವರುಗಳು ಅಮೆರಿಕ ಪ್ರವಾಸದಲ್ಲಿದ್ದಾರೆ. ಸ್ವಂತ ಖರ್ಚಿನಲ್ಲಿ 200 ಹೆಚ್ಚು ಶಾಸಕರು ಅಮೆರಿಕಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಅಕ್ಕನ ಕರೆಗ ಕಡೆಗೂ ಓಗೊಟ್ಟ ಶೋಭಕ್ಕ