ಕಾನ್ಪುರ್ : ನಿಗೂಢ ಸ್ಫೋಟಕ್ಕೆ ಇಬ್ಬರು ಬಲಿ
ಕಾನ್ಪುರ್, ಆ. 25 : ನಗರದ ಶಾರದಾ ನಗರ ಪ್ರದೇಶದ ರಾಜೀವ ಬಡಾವಣೆಯಲ್ಲಿರುವ ವಸತಿ ನಿಲಯವೊಂದರಲ್ಲಿ ನಿಗೂಢವಾಗಿ ಪ್ರಬಲ ಸ್ಫೋಟ ಸಂಭವಿಸಿರುವ ಹಿನ್ನೆಲೆಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ವಸತಿ ನಿಲಯ ಮಾಲೀಕರ ಪುತ್ರ ರಾಜೀವ ಮಿಶ್ರಾ ಹಾಗೂ ಆತನ ಸ್ನೇಹಿತ ಭೂಪಿಂದರ್ ಸಿಂಗ್ ಸ್ಫೋಟದಲ್ಲಿ ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ. ಸ್ಫೋಟದ ಭೀಕರತೆಗೆ ವಸತಿ ನಿಲಯದ ಮೇಲ್ಛಾವಣೆ ಕುಸಿದು ವಸತಿ ನಿಲಯದ ಮಾಲೀಕರ ಪುತ್ರ ರಾಜೀವ ಹಾಗೂ ಸ್ನೇಹಿತ ಭೂಪಿಂದರ್ ಸಿಂಗ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟಕ್ಕೆ ಹತ್ತಿರದಲ್ಲಿನ ಮನೆಗಳ ಮೇಲ್ಛಾವಣೆಗಳು ಬಿರುಕುಬಿಟ್ಟಿವೆ. ಗಾಯಗಳಾಗಿರುವ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಸ್ಥಳ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದಾರೆ. ವಸತಿ ನಿಲಯದಲ್ಲಿ ಸುಧಾರಿತ ಸ್ಫೋಟ ಸಾಮಗ್ರಿಗಳು, ವೈರ್ ಗಳು, ಟೈಮರ್ ಗಳು ದೊರೆಕಿವೆ ಎಂದು ಮೂಲಗಳು ತಿಳಿಸಿವೆ. ವಸತಿ ನಿಲಯವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಕಳೆದ ತಿಂಗಳ ಬೆಂಗಳೂರು ಮತ್ತು ಅಹಮದಾಬಾದ್ ನಲ್ಲಿ ಬಾಂಬ್ ಸ್ಫೋಟಗೊಂಡು 60ಕ್ಕೆ ಹೆಚ್ಚು ಜನರು ಸಾವನ್ನಪ್ಪಿದ್ದರು. ನೂರಾರು ಜನರು ಗಾಯಗೊಂಡಿದ್ದರು. ಈ ಪ್ರಕರಣಗಳು ಹಸಿರಿರುವಾಗಲೇ ಮತ್ತೆ ನಿಗೂಢ ಸ್ಫೋಟ ಸಂಭವಿಸಿರುವುದು ಜನರಲ್ಲಿ ಆತಂಕ ಉಂಟುಮಾಡಿದೆ.
(ದಟ್ಸ್ ಕನ್ನಡ ವಾರ್ತೆ)