ಓರಿಸ್ಸಾ : ಕ್ರೈಸ್ತ ಸನ್ಯಾಸಿನಿ ಸಜೀವ ದಹನ
ಭುವನೇಶ್ವರ್, ಆ. 25 : ವಿಶ್ವ ಹಿಂದೂ ಪರಿಷತ್ನ ಕಾರ್ಯಕರ್ತರ ಹತ್ಯೆಯನ್ನು ವಿರೋಧಿಸಿ ಸೋಮವಾರ ಕರೆಯಲಾಗಿದ್ದ ಬಂದ್ ತೀವ್ರ ಹಿಂಸಾರೂಪಕ್ಕೆ ತಿರುಗಿದ್ದು, ಕ್ರೈಸ್ತ ಸನ್ಯಾಸಿನಿಯೋರ್ವಳನ್ನು ಜೀವಂತ ಸುಡಲಾಗಿದೆ.
ಭಾನುವಾರ ಕೂಡ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರಕ್ಕೆ ಬೆಂಕಿ ಹಚ್ಚಲಾಗಿತ್ತು. ಇಂದು ಮುಂದುವರಿದ ಹಿಂಸೆಯಲ್ಲಿ ಬರ್ಗರ್ ಪೇಟೆಯಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಅನಾಥಾಶ್ರಮಕ್ಕೆ ಬೆಂಕಿ ಹಚ್ಚಲಾಗಿದೆ. ಇದರಲ್ಲಿ ಸನ್ಯಾಸಿನಿ ದಹನಗೊಂಡಿದ್ದು, ಪಾದ್ರಿ ಮತ್ತಿತರರು ಗಾಯಗೊಂಡಿದ್ದಾರೆ.
ಕಂದಮಂಡಲ ಜಿಲ್ಲೆಯ ಜಲೇಶ್ಪೇಟ್ ಆಶ್ರಮದಲ್ಲಿ ವಾಸವಾಗಿದ್ದ ವಿಎಚ್ಪಿಯ ಕೇಂದ್ರ ಸಮಿತಿ ಸದಸ್ಯ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಹಾಗೂ ಅವರ ಅನುಯಾಯಿಗಳನ್ನು 30 ಮಂದಿ ಶಂಕಿತ ಮಾವೋವಾದಿಗಳು ಶನಿವಾರ ರಾತ್ರಿ ಗುಂಡಿಟ್ಟು ಹತ್ಯೆ ಮಾಡಿದ್ದರು. ಸ್ವಾಮಿ ಅವರನ್ನು ಎಕೆ 47 ರೈಫಲ್ನಿಂದ ಕೊಲೆ ಮಾಡಲಾಗಿದೆ ಎಂದು ಓರಿಸ್ಸಾ ಪೊಲೀಸ್ ಮಹಾನಿರ್ದೇಶಕ ಗೋಪಾಲ್ ಚಂದ್ರ ನಂದ ತಿಳಿಸಿದ್ದಾರೆ. ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಹತ್ಯೆ ಘಟನೆ ತಿಳಿಯುತ್ತಿದ್ದಂತೆಯೇ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಉದ್ನಿಗ್ವ ವಾತಾವರಣ ನಿರ್ಮಾಣವಾಗಿದೆ. ಬಂದ್ನಿಂದಾಗಿ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದೆ.
ವಿಎಚ್ಪಿ ಕಾರ್ಯಕರ್ತರು ಪ್ರತಿ ನಗರದ ಬೀದಿಬೀದಿಗಳಲ್ಲಿ ಹತ್ಯೆ ಘಟನೆ ಖಂಡಿಸಿ ಪ್ರತಿಭಟನೆ ಕೈಗೊಂಡರು. ವಿಎಚ್ ಪಿಯ ಮುಖಂಡ ಪ್ರವೀಣ್ ತೊಗಾಡಿಯಾ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಶಾಲಾ ಕಾಲೇಜುಗಳಿಗೆ, ಬ್ಯಾಂಕು, ಸರ್ಕಾರಿ ಕಚೇರಿಗಳಿಗೆ ರಜೆ ನೀಡಲಾಗಿದೆ. ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಕೆಲವಡೆ ಟೈರುಗಳಿಗೆ ಬೆಂಕಿ ಹಚ್ಚಿ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ತೀರಿಸಿಕೊಂಡಿದ್ದಾರೆ. ಪರಿಸ್ಥಿತಿ ಕೈಮೀರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀನ ಪಟ್ನಾಯಕ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರು ಗೋವುಗಳ ಬಲಿಯನ್ನು ವಿರೋಧಿಸಿ ಅನೇಕ ಹೋರಾಟಗಳನ್ನು ನಡೆಸಿದ್ದರು. ಅಲ್ಲದೇ ಹಿಂದೂ ಧರ್ಮದವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವುದನ್ನು ತೀವ್ರವಾಗಿ ಖಂಡಿಸಿ ರಾಜ್ಯಾದ್ಯಂತ ಆಂದೋಲನ ನಡೆಸಿದ್ದರು. ಮತಾಂತರ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)