ಮೈಸೂರು ಅರಮನೆ ಸ್ಫೋಟಿಸುವ ಬೆದರಿಕೆ ಕರೆ
ಮೈಸೂರು, ಆ. 25 : ಮೈಸೂರಿನ ಐತಿಹಾಸಿಕ ಅರಮನೆಯನ್ನು ಸ್ಫೋಟಗೊಳಿಸುವುದಾಗಿ ಅನಾಮೇಧೆಯ ಬೆದರಿಕೆಯ ಕರೆಯೊಂದು ಅರಮನೆ ಟಕೆಟ್ ಕೌಂಟರ್ ವಿಭಾಗಕ್ಕೆ ಬಂದಿರುವ ಘಟನೆ ಸೋಮವಾರ ಜರುಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಬಾಂಬ್ ನಿಷ್ಕ್ರಿಯ ದಳ, ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಅರಮನೆಗೆ ಆಗಮಿಸಿದ್ದು, ಸ್ಥಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರು, ಅಹಮದಾಬಾದ್ ನಗರಗಳಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಅನೇಕ ಸಾವು ನೋವುಗಳು ಸಂಭವಿಸಿದ್ದವು. ಜತೆಗೆ ಅಹಮದಾಬಾದ್ ಸ್ಫೋಟದಲ್ಲಿ ಬಿಜಾಪೂರ ಜಿಲ್ಲೆಯ ತಾಳಿಕೋಟೆ ಇಬ್ಬರು ಶಂಕಿತ ಉಗ್ರರನ್ನು ಗುಜರಾತ ಪೊಲೀಸರು ಬಂಧಿಸಿ ಅಹಮದಾಬಾದ್ ಗೆ ಕರೆಕೊಂಡು ಹೋಗಿದ್ದಾರೆ.
ಸಿಮಿ ಸಂಘಟನೆಗೆ ಜಾಲ ರಾಜ್ಯಾದ್ಯಂತ ಹರಡಿದ್ದು, ಬೆಳಗಾವಿ, ಬಿಜಾಪೂರ, ಗುಲ್ಬರ್ಗಾ, ಧಾರವಾಡ ಸೇರಿದಂತೆ ವಿವಿಧ ಭಾಗಗಳಲ್ಲಿ ಸಿಮಿ ಸಂಘಟನೆ ತನ್ನ ಕಾರ್ಯಚಟುವಟಿಕೆಗಳನ್ನು ಹೊಂದಿದೆ ಎನ್ನಲಾಗಿದೆ. ಸಿಮಿ ಸಂಘಟನೆಯೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ. ಆದರೂ ಕೂಡಾ ಸಿಮಿ ಸಂಘಟನೆ ನಂಟು ಗುಪ್ತವಾಗಿ ವ್ಯಾಪಕವಾಗಿ ಹರಡಿದೆ ಎನ್ನುವ ಮಾಹಿತಿ ಪೊಲೀಸ್ ಇಲಾಖೆಗೆ ಲಭ್ಯವಾದ ಹಿನ್ನೆಲೆಯಲ್ಲಿ ಕಾರ್ಯಚರಣೆ ಮುಂದುವರೆದಿದೆ. ಈ ನಡುವೆ ಸಂಭ್ರಮದ ದಸರಾ ಹಬ್ಬಕ್ಕೆ ರೆಡಿಯಾಗುತ್ತಿರುವ ಐತಿಹಾಸಿಕ ನಗರಿಗೆ ಉಗ್ರರ ನೆರಳು ಬಿದ್ದಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಕಳೆದ ಕೆಲ ದಿನಗಳಿಂದ ಮೈಸೂರು ಅರಮನೆಗೆ ಉಗ್ರರ ದಾಳಿ ನಡೆಸುವ ಆತಂಕ ಇದ್ದೆ ಇದೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ನಿಯೋಜಿಸಲಾಗಿದೆ. ಇಷ್ಟಾದರೂ ಕೂಡಾ ಇಂದು ಸ್ಫೋಟ ಬೆದರಿಕೆ ಕರೆ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಉಗ್ರರ ಹಿಟ್ ಲಿಸ್ಟಿನಲ್ಲಿ ಅರಮನೆಗೆ ಭಾರಿ ಬಿಗಿ ಭದ್ರತೆ ನಿಯೋಜಿಸಬೇಕು ಎನ್ನುವುದು ಸಾರ್ವಜನಿಕ ವಲಯದ ಅಭಿಪ್ರಾಯವಾಗಿದೆ.
(ದಟ್ಸ್ ಕನ್ನಡ ವಾರ್ತೆ)