ನ್ಯಾಯಾಧೀಶ ನೇಮಕಕ್ಕೆ ನವಾಜ್ ಷರೀಫ್ ಗಡುವು
ಇಸ್ಲಾಮಾಬಾದ್, ಆ. 21 : ಪಾಕಿಸ್ತಾನದಲ್ಲಿ ಮತ್ತೆ ರಾಜಕೀಯ ಅಭದ್ರತೆ ಶುರುವಾಗಿದೆ. ಸಮ್ಮಿಶ್ರ ಸರ್ಕಾರದ ಪ್ರಮುಖ ಅಂಗ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್ ಮುಖಂಡ ಹಾಗೂ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು 24 ಗಂಟೆಗಳ ಗಡುವು ನೀಡಿದ್ದು, ಅಮಾನತುಗೊಂಡಿರುವ ನ್ಯಾಯಾಧೀಶರನ್ನು ಮರುನೇಮಕ ಮಾಡಿಕೊಳ್ಳದಿದ್ದಲ್ಲಿ ಸರ್ಕಾರದಿಂದ ಹೊರಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನ್ಯಾಯಾಧೀಶರನ್ನು ಅಮಾನತು ಮಾಡಿರುವ ಕ್ರಮ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವಂಥ ಕೆಲಸವಾಗಿದೆ. ದೇಶದ ಸಂವಿಧಾನ ಹಾಗೂ ಕಾನೂನಿನಲ್ಲಿ ನಂಬಿಕೆ ಇಲ್ಲದವರು ಮತ್ತು ಸರ್ವಾಧಿಕಾರಿ ಧೋರಣೆ ಹೊಂದಿರುವವರು ಈ ಕೃತ್ಯವನ್ನು ಎಸಗುತ್ತಾರೆ. ಆದ್ದರಿಂದ ಪ್ರಜಾಪ್ರಭುತ್ವ ಆಡಳಿತದಲ್ಲಿರುವ ದೇಶದಲ್ಲಿ ನ್ಯಾಯಾಲಯ, ನ್ಯಾಯಾಧೀಶರ ಪಾತ್ರ ಬಹುಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ನವಾಜ್ ಷರೀಫ್ ಪಟ್ಟುಹಿಡಿದಿದ್ದಾರೆ. 24 ಗಂಟೆ ಯೊಳಗೆ ಅಮಾನತುಗೊಂಡಿರುವ ನ್ಯಾಯಾಧೀಶರನ್ನು ನೇಮರ ಮಾಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಯೂಸೆಫ್ ರಜಾ ಗಿಲಾನಿ ಅವರಿಗೆ ಸೂಚನೆ ನೀಡಿದ್ದಾರೆ.
ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ರಾಜೀನಾಮೆ ನೀಡಿದ 24 ಗಂಟೆಗಳಲ್ಲಿ ಅಮಾನತುಗೊಂಡಿರುವ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳುವುದಾಗಿ ಸರ್ಕಾರದ ಕಿಂಗ್ ಮೇಕರ್ ಹಾಗೂ ಪಿಪಿಪಿ ಪಕ್ಷದ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಭರವಸೆ ನೀಡಿದ್ದರು. ಆದರೆ ಮುಷರಫ್ ರಾಜೀನಾಮೆ ನೀಡಿ ನಾಲ್ಕು ದಿನಗಳು ಕಳೆದರೂ ನ್ಯಾಯಾಧೀಶರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ ಎನ್ನುವುದು ನವಾಜ್ ಷರೀಫ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಜರ್ದಾರಿ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಅಧ್ಯಕ್ಷ ಮುಷರಫ್ ಸುಪ್ರಿಂಕೋರ್ಟ್ ನ್ಯಾಯಾಧೀಶ ಇಫ್ತೀಕರ್ ಚೌಧರಿ ಸೇರಿದಂತೆ ಎಲ್ಲಾ ನ್ಯಾಯಾಧೀಶರನ್ನು ಅಮಾನತುಗೊಳಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ಪಾಕಿಸ್ತಾನದ ಸಮ್ಮಿಶ್ರ ಸರ್ಕಾರದಲ್ಲಿ ಬಿರುಕು