ಆಪರೇಶನ್ ಕಮಲಕ್ಕೆ ದೇವೇಗೌಡ ತೀವ್ರ ಆಕ್ಷೇಪ
ಬೆಂಗಳೂರು, ಆ. 20 : ಆಪರೇಷನ್ ಕಮಲ ಖಂಡನೀಯ ಕೆಲಸ. ಭಾರತೀಯ ಜನತಾ ಪಕ್ಷದ ದುರಾಡಳಿತವನ್ನು ವಿರೋಧಿಸಿ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಶನ್ ಕಮಲದ ಹೆಸರಿನಲ್ಲಿ ಬಿಜೆಪಿ ಮುಖಂಡರು ಬೇರೆ ಪಕ್ಷದ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಕಿಡಿಕಾರಿದರು. ಭಾರತೀಯ ಜನತಾ ಪಕ್ಷ ಅಧಿಕಾರ ಬಂದ ಮೂರು ತಿಂಗಳು ಕಳೆದಿದೆ. ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ರೈತರ ಮಗ ಎಂದು ಹೇಳಿಕೊಳ್ಳುವುದನ್ನು ಬಿಟ್ಟು ಬೇರೆ ಏನನ್ನು ಮಾಡುತ್ತಿಲ್ಲ. ರಾಜ್ಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
ರಾಜ್ಯದ ಅನೇಕ ಕಡೆಗಳಲ್ಲಿ ಮುಂಗಾರು ಮಳೆ ಬಾರದೇ ರೈತರು ಸಂಕಷ್ಟದ ಜೀವನ ನಡೆಸುತ್ತಿದ್ದರೂ ಅದೆಲ್ಲವನ್ನು ಬದಿಗೊತ್ತಿ ಅನ್ಯ ಪಕ್ಷಗಳ ಶಾಸಕರ ಖರೀದಿಗೆ ಸರ್ಕಾರ ಮುಂದಾಗಿದೆ . ಅನ್ಯ ಪಕ್ಷಗಳ ಶಾಸಕರಿಗೆ ವಿವಿಧ ಆಮಿಷಗಳನ್ನು ನೀಡಿ ಇನ್ನೊಂದು ಪಕ್ಷವನ್ನು ನಾಶ ಮಾಡುವ ಕೆಲಸ ಕೈಹಾಕಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದಿಂದ ಪಕ್ಷಾಂತರ ಮಾಡುತ್ತಿರುವ ಶಾಸಕರನ್ನು ತಡೆಯುವುದಿಲ್ಲ. ಹೋಗುವವರನ್ನು ತಡೆಯಲು ಅಸಾಧ್ಯದ ಕೆಲಸ. ಪಕ್ಷಾಂತರದಿಂದ ಪಕ್ಷಕ್ಕೆ ಯಾವ ನಷ್ಟವಿಲ್ಲ ಎಂದು ವಿಶ್ವಾಸ ನುಡಿದರು. ಜೆಡಿಎಸ್ ಬಲವರ್ಧನೆಯ ಜತೆಗೆ ಬಿಜೆಪಿಯ ದುರಾಡಳಿತವನ್ನು ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ದೇವೇಗೌಡ ಹೇಳಿದರು.
ದೇವೇಗೌಡರ ಸರ್ವಾಧಿಕಾರ ನೀತಿಯನ್ನು ವಿರೋಧಿಸಿ ಅನೇಕ ಶಾಸಕರು ಮತ್ತು ಸಂಸದರು ಪಕ್ಷ ಬಿಟ್ಟು ಹೋಗಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಪರೇಶನ್ ಕಮಲ ಹೆಸರಿನಲ್ಲಿ ಅನ್ಯ ಪಕ್ಷಗಳ ಶಾಸಕರನ್ನು ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ಆಮಿಷ ನೀಡಿ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುತ್ತಿದ್ದಾರೆ. ಆಪರೇಶನ್ ಕಮಲ ಕಾರ್ಯಚರಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ, ಶಿವನಗೌಡ ನಾಯಕ್, ಗೌರಿ ಶಂಕರ, ಉಮೇಶ್ ಕತ್ತಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ಆಪರೇಶನ್ ಕಮಲಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಮುಖಂಡ ವರ್ತನೆಯನ್ನು ಖಂಡಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಕೂಡಾ ಶಾಸಕರು ಪಕ್ಷಾಂತರದ ಮೂಲಕ ಬಿಜೆಪಿ ಸೇರಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)