ಡಂಬುಲಾದಲ್ಲಿ ಟೀಮ್ ಇಂಡಿಯಾಕ್ಕೆ ಹೀನಾಯ ಸೋಲು
ಡಂಬುಲಾ, ಆ. 18 : ಸೋಮವಾರ ಇಲ್ಲಿ ನಡೆದ ಭಾರತ- ಶ್ರೀಲಂಕಾ ಪ್ರಥಮ ಒಂದು ದಿನದ ಪಂದ್ಯದಲ್ಲಿ ಭಾರತ ತಂಡವು ಎಂಟು ವಿಕೆಟ್ ಗಳ ಹೀನಾಯ ಸೋಲನುಭವಿಸಿತು.
ಇಂದು ಬೆಳಗ್ಗೆ ಇಲ್ಲಿನ ರಂಗೀರಿ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ ನೀರಸವಾಗಿಯೇ ಬ್ಯಾಟಿಂಗ್ ಮಾಡುವ ಮೂಲಕ 146 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂದು ಕಳಪೆ ಪ್ರದರ್ಶನ ನೀಡಿತು. ಆರಂಭದಲ್ಲಿ ಚಾಮುಂಡ ವಾಸ್ ಮತ್ತು ಕುಲಶೇಖರ ಅವರ ಕರಾರುವಕ್ಕಾದ ಬೌಲಿಂಗ್ ಎದುರು ಭಾರತೀಯ ಬ್ಯಾಟಿಂಗ್ ಪಡೆ ರನ್ ಗಳಿಸಲು ಹರಸಾಹಸಪಟ್ಟಿತು. ಒಂದೊಂದು ರನ್ ಗೂ ಪರದಾಡುವಂತಾಯಿತು. ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಗೌತಮ್ ಗಂಭೀರ, ಧೋನಿ, ಯುವರಾಜ್ ಸಿಂಗ್ ಹೀಗೆ ಎಲ್ಲ ಆಟಗಾರರೂ ವಿಕೆಟ್ ಒಪ್ಪಿಸಿ ಪೆವಿಲಿಯನ್ ದಾರಿಹಿಡಿದರು.
ಗೌತಮ್ ಗಂಭೀರ್ ತಮ್ಮ ಎಂದಿನ ಆಟವನ್ನು ಪ್ರದರ್ಶಿಸುವಲ್ಲಿ ವಿಫಲರಾಗಿದ್ದು, ಭಾರತಕ್ಕೆ ಮೊದಲ ಆಘಾತ ನೀಡಿತು. ಗಂಭೀರ ನಂತರ ಬಂದ ಯಾವ ಭಾರತೀಯ ಬ್ಯಾಟ್ಸ್ ಮನ್ ಗಳು ಜವಾಬ್ದಾರಿಯುತ ಆಡುವಲ್ಲಿ ವಿಫಲರಾದರು. ಯುವರಾಜ್ ಸಿಂಗ್ ಅವರ 23 ರನ್ ಗಳು ಭಾರತೀಯ ಪಾಳೆಯದಲ್ಲಿ ದೊಡ್ಡ ಮೊತ್ತವಾಗಿದೆ. ಲಂಕಾದ ಕುಲಶೇಖರ್ 23 ರನ್ ನೀಡಿ ಮೂರು ವಿಕೆಟ್ ಕಿತ್ತರೆ, ಟೆಸ್ಟ್ ಪಂದ್ಯದಲ್ಲಿ ಭಾರತೀಯರಿಗೆ ಸಿಂಹಸ್ವಪ್ನರಾಗಿ ಕಾಡಿದ್ದ ಅಜಂತಾ ಮೆಂಡಿಸ್ ಇಲ್ಲಿ ಕೂಡಾ ತಮ್ಮ ಕರಾಮತ್ತು ಪ್ರದರ್ಶಿಸಿದರು. ಮುತ್ತಯ್ಯ ಮುರಳೀಧನ್ 3 ವಿಕೆಟ್ ಪಡೆದರು. ಲಂಕಾ ನಾಯಕ ಜಯವರ್ಧನೆ ಮತ್ತು ಚಾಮರ ಕೆಪುಗಡೆರಾ ಅವರ ಸಮಯೋಚಿತ ಅಟ ಮೂಲಕ ಅಲ್ಪ ಮೊತ್ತವನ್ನು ನಿರಾಂತಕವಾಗಿ ದಾಟಿ ಗೆಲುವಿನ ನಗೆ ಬೀರಿತು. ಲಂಕಾ ಕೇವಲ 34 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ಮುಟ್ಟಿತು.
(ದಟ್ಸ್ ಕನ್ನಡ ವಾರ್ತೆ)