ಪಾಕ್ ನ ಆಂತರಿಕ ವಿಷಯದಲ್ಲಿ ಭಾರತಕ್ಕೆ ಆಸಕ್ತಿಯಿಲ್ಲ
ಬೆಹರಾಮ್ ಪುರ್, ಆ. 18 : ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ರಾಜೀನಾಮೆ ನೀಡಿರುವ ಸಂಗತಿ ಆ ದೇಶದ ಆಂತರಿಕ ವಿಷಯವಾಗಿದೆ. ಆದ್ದರಿಂದ ಭಾರತ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸುವ ಮಾತೇ ಇಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪರ್ವೇಜ್ ಮುಷರಫ್ ಅವರ ಅಧಿಕಾರಾವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಭಾರತ ಯತ್ನಿಸುತ್ತದೆ ಎಂದರು. ಪಾಕಿಸ್ತಾನದಲ್ಲಿ ನಡೆದಿರುವ ರಾಜಕೀಯ ಏರಿಳಿತಗಳು ಶೀಘ್ರದಲ್ಲಿ ಕೊನೆಗೊಳ್ಳಲಿವೆ ಎಂದ ಅಶಾಭಾವ ವ್ಯಕ್ತಪಡಿಸಿದರು.
ಭಾರತದ ಹಿತಾಸಕ್ತಿಗೆ ಅನುಗುಣವಾಗಿ ಅಲ್ಲಿನ ಅಡಳಿತ ಪಕ್ಷ ನಡೆದುಕೊಳ್ಳತೊಡಗಿದೆ. ಅದರಿಂದಾಗಿ ಅಧ್ಯಕ್ಷ ಸ್ಥಾನದಿಂದ ಮುಷರಫ್ ಅವರನ್ನು ಕೆಳಗಿಳಿಸಲಾಯಿತು ಎನ್ನುವ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅವರು, ಪ್ರಧಾನಮಂತ್ರಿಯವರ ರಾಷ್ಟ್ರೀಯ ಸಲಹೆಗಾರ ಎಂ.ಕೆ.ನಾರಾಯಣ ಅವರು ಹೇಳಿರುವಂತೆ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು ಹಾಗೆಯೇ ಜಿಹಾದಿಗಳಿಗೆ ಕಡಿವಾಣ ಇಲ್ಲದಂತಾಗಿತ್ತು. ಜತೆಗೆ ರಾಜಕೀಯ ಸಮಸ್ಯೆಗಳು ಉದ್ಭವಿಸಿದ ಪರಿಣಾಮ ಅಲ್ಲಿನ ಅಡಳಿತ ಪಕ್ಷ ಇಂಥ ನಿರ್ಣಯಕ್ಕೆ ಬಂದಿರಬಹುದು ಎಂದು ಪ್ರಣಬ್ ಮುಖರ್ಜಿ ಹಾರಿಕೆಯ ಉತ್ತರವನ್ನು ನೀಡಿದರು.
ಪಾಕಿಸ್ತಾನದ ಜತೆಗೆ ದ್ವಿರಾಷ್ಟ್ರ ಮುಂದುವರೆಸುವುದಾಗಿ ಹೇಳಿದ ಅವರು, ಶೀಘ್ರದಲ್ಲಿ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಕಳೆದ ಕೆಲ ದಿನಗಳ ಹಿಂದೆ ಪ್ರಣವ್ ಮುಖರ್ಜಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಾಕ್ ಪ್ರಧಾನಮಂತ್ರಿ ಯೂಸೆಫ್ ರಜಾ ಘಿಲಾನಿ, ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್, ಮತ್ತು ಪಿಪಿಪಿ ಮುಖಂಡ ಅಸೀಫ್ ಅಲಿ ಜರ್ದಾರಿ ಅವರನ್ನು ಭೇಟಿ ಸೌಹಾರ್ಧ ಮಾತುಕತೆ ನಡೆಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ಪಾಕಿಸ್ತಾನದ ಸರ್ವಾಧಿಕಾರಿ ಮುಷರಫ್ ರಾಜೀನಾಮೆ