ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿಎಂ ವೈಮಾನಿಕ ಸಮೀಕ್ಷೆ
ಬೆಂಗಳೂರು, ಆ.17: ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಹೆಲಿಕಾಫ್ಟರ್ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.
ಇಂದು ಬೆಳಗ್ಗೆ 7ಗಂಟೆಗೆ ಬೆಳಗಾವಿ,ಬಾಗಲಕೋಟೆ,ವಿಜಾಪುರ ಸೇರಿದಂತೆ ನೆರೆ ಹಾವಳಿ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ನಷ್ಟಕ್ಕೊಳಗಾಗಿರುವ ಪ್ರದೇಶಗಳಲ್ಲಿ ಇಳಿದು ಸ್ಥಿತಿಗತಿಗಳ ಅವಲೋಕನ ನಡೆಸಿದರು.
ನೆರೆ ಹಾವಳಿಯಿಂದ ರಾಜ್ಯದ 9 ಜಿಲ್ಲೆಗಳ 173 ಗ್ರಾಮಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಅಲ್ಲಿನ ಪರಿಸ್ಥಿತಿ ಹಾಗೂ ನಿರಾಶ್ರಿತರಿಗೆ ಒದಗಿಸಿರುವ ಸೌಲಭ್ಯಗಳು,ತುರ್ತು ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಯಾವುದೇ ಮುನ್ಸೂಚನೆ ನೀಡದೆ ಕೊಯ್ನಾ ಅಣೆಕಟ್ಟೆಯಿಂದ ಮಹಾರಾಷ್ಟ್ರನೀರು ಬಿಟ್ಟಿರುವ ಕಾರಣ ಕರ್ನಾಟಕದ ಗಡಿ ಭಾಗದ ಹಲವಾರು ಪ್ರದೇಶಗಳು ಜಲಾವೃತವಾಗಿವೆ. ಈ ಪ್ರದೇಶಗಳಲ್ಲಿ ಉಂಟಾಗಿರುವ ಆಸ್ತಿ-ಪಾಸ್ತಿ ನಷ್ಟ,ಪ್ರಾಣಹಾನಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸಮೀಕ್ಷೆಯಲ್ಲಿ ಮುಖ್ಯಮಂತ್ರಿಗಳ ಜೊತೆ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ,ಕಂದಾಯ ಸಚಿವ ಕರುಣಾಕರ ರೆಡ್ಡಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತಿತರು ಇದ್ದರು. ಈ ಸಂದರ್ಭದಲ್ಲಿ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ನೆರೆಹಾವಳಿ ಪರಿಸ್ಥಿತಿ ಕುರಿತು ತಾವು ಸ್ಥಳೀಯ ಪ್ರತಿನಿಧಿಗಳು,ಅಧಿಕಾರಿಗಳ ಜೊತೆ ಸಮಾಲೋಚಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ನಂತರ ಮುಖ್ಯಮಂತ್ರಿಗಳು ಆಲಮಟ್ಟಿ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸಿದರು. ಬಾಗಲಕೊಟೆ,ವಿಜಾಪುರ,ಕೊಪ್ಪಳ,ಚಿಕ್ಕೋಡಿಗಳಲ್ಲಿ ವೈಮಾನಿಕ ಸಮೀಕ್ಷೆಗಾಗಿ ತೆರಳಿದರು.
(ದಟ್ಸ್ಕನ್ನಡ ವಾರ್ತೆ)