ಉಕ ಪ್ರವಾಹಪೀಡಿತ ಪ್ರದೇಶಗಳಿಗೆ ಯಡಿಯೂರಪ್ಪ ಭೇಟಿ
ಬೆಂಗಳೂರು, ಆ. 16 : ಅತಿವೃಷ್ಟಿಯಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ ಬೆಳಗಾವಿ ಜಿಲ್ಲೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಜುಲೈ 17ರಂದು ಭೇಟಿ ನೀಡಿ ಪ್ರವಾಹ ಪೀಡಿತ ಗ್ರಾಮಗಳ ಸಮೀಕ್ಷೆ ನಡೆಸಲಿದ್ದಾರೆ.
ಉತ್ತರ ಕರ್ನಾಟಕದಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ಮತ್ತು ಮಹಾರಾಷ್ಟ್ರ ಕೊಯ್ನಾ ಅಣೆಕಟ್ಟೆಯಿಂದ ನಿರೀಕ್ಷೆಗೂ ಮೀರಿ ನೀರು ಹರಿಬಿಡುತ್ತಿರುವುದರಿಂದ ಕೃಷ್ಣಾ ನದಿ ತೀರದ ಅನೇಕ ಗ್ರಾಮಗಳು ಭಾಗಶಃ ಮುಳುಗಡೆಯಾಗಿವೆ. ಗ್ರಾಮಸ್ಥರ ಮನೆ-ಮಠ ಕಳೆದುಕೊಂಡಿದ್ದಲ್ಲದೆ ಬೆಳೆಗೂ ಅಪಾರವಾದ ಹಾನಿ ಸಂಭವಿಸಿದೆ.
ಚಿಕ್ಕೋಡಿ ತಾಲೂಕಿನ ನಿಪ್ಪಾಣಿಯಲ್ಲಿ ಹರಿಯುತ್ತಿರುವ ದೂಧ್ಗಂಗಾ, ವೇದಗಂಗಾ ಮತ್ತು ಪಂಚಗಂಗಾ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಮಳೆ ಮತ್ತು ಪ್ರವಾಹದ ಪ್ರಮಾಣ ತಗ್ಗಿದ್ದರೂ ಸುತ್ತಲಿನ ಗ್ರಾಮಗಳು ನೀರಾವೃತವಾಗಿವೆ. ಯಡಿಯೂರಪ್ಪನವರು ಈ ಭಾಗಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಮುಖ್ಯಮಂತ್ರಿಯವರೊಡನೆ ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ಭೇಟಿ ನೀಡಲಿದ್ದಾರೆ. ಇದರೊಂದಿಗೆ, ಕೃಷ್ಣಾ ನದಿತೀರದ ಗ್ರಾಮಗಳನ್ನೂ ವೀಕ್ಷಿಸಿ ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಮುಖ್ಯಮಂತ್ರಿಯವರು ಪ್ರವಾಹದಿಂದ ಪೀಡಿತವಾಗಿರುವ ಬಿಜಾಪಿರು, ಬಾಗಲಕೋಟ್ ಜಿಲ್ಲೆಯ ಗ್ರಾಮಗಳನ್ನೂ ಸಂದರ್ಶಿಸಲಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಭೇಟಿ ನೀಡಿದ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪ್ರವಾಹ ಪರಿಹಾರದ ಬೇಡಿಕೆಯನ್ನು ಕೇಂದ್ರಕ್ಕೆ ಸಲ್ಲಿಸಲಿದ್ದಾರೆ.
ಕುಗ್ಗಿದ ಮಳೆಯ ಪ್ರಮಾಣ : ಉತ್ತರ ಕರ್ನಾಟಕ ಮತ್ತು ಕರಾವಳಿಯಲ್ಲಿ ಕೆಲದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆಯ ಪ್ರಮಾಣ ತುಸು ತಗ್ಗಿದೆ. ಮಡಿಕೇರಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯ ಬಿರುಸು ಇನ್ನೂ ಅಷ್ಟು ಕುಗ್ಗಿಲ್ಲ. ಆದರೆ, ಉತ್ತರ ಕರ್ನಾಟಕದಲ್ಲಿ ಅಲ್ಪ ಬಿಡುವು ಪಡೆದಿದೆ.
ಕಳೆದ 24 ಗಂಟೆಗಳಲ್ಲಿ ಆಗುಂಬೆಯಲ್ಲಿ ಅತಿಹೆಚ್ಚು 10 ಸೆಂ.ಮೀ. ಮಳೆ ಸುರಿದಿದೆ. ಸಿದ್ದಾಪುರದಲ್ಲಿ 5 ಸೆಂ.ಮೀ. ಮಳೆಯಾದರೆ, ಗೇರುಸೊಪ್ಪ, ಲಿಂಗನಮಕ್ಕಿ ಮತ್ತು ಕಮ್ಮರಡಿಯಲ್ಲಿ ತಲಾ 4 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಮೂಡುಬಿದ್ರೆ, ಕೋಟ, ಶೃಂಗೇರಿ, ಕೊಲ್ಲೂರು ಮತ್ತು ಕುಂದಾಪುರದಲ್ಲಿಯೂ ಮಳೆಯ ಭರಾಟೆ ಮುಂದುವರಿದಿದೆ.
(ದಟ್ಸ್ ಕನ್ನಡ ವಾರ್ತೆ)