ಲಂಚ ಸ್ವೀಕರಿಸುತ್ತಿದ್ದ ಅಧೀಕ್ಷಕ, ಲೋಕಾಯುಕ್ತ ಬಲೆಗೆ
ಬೆಂಗಳೂರು, ಅ15: ಪಿಯು ಕಾಲೇಜೊಂದರ ಸ್ಥಳಾಂತರಕ್ಕೆ ಬೇಕಿದ್ದ ಮಾಹಿತಿ ನೀಡಲು 5 ಸಾವಿರ ರು. ಲಂಚ ಸ್ವೀಕರಿಸಿದ ಆರೋಪದ ಮೇಲೆ ಅಧೀಕ್ಷಕ ಎಲ್. ಮುನಿನಾಯಕ್ ಅವರನ್ನು ಮಂಗಳವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ ಪ್ರಕರಣ ತಡವಾಗಿ ವರದಿಯಾಗಿದೆ.
ಬೆಂಗಳೂರು ಉತ್ತರ ಜಿಲ್ಲೆಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಅಧೀಕ್ಷಕರಾಗಿರುವ ಎಲ್. ಮುನಿನಾಯಕ್ ಅವರು ಚಿಕ್ಕಬಾಣಾವಾರದ ಪವಿತ್ರ ಪದವಿ ಪೂರ್ವ ಕಾಲೇಜು ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಬೇಕಿದ್ದ ಮಾಹಿತಿ ನೀಡಲುಅರ್ಜಿದಾರರಿಂದ ಸುಮಾರು 25 ಸಾವಿರ ರು ಕೇಳಿ, ಕೊನೆಗೆ 5 ಸಾವಿರ ರುಗಳನ್ನು ನೀಡಲು ಆಗ್ರಹಿಸಿದ್ದರು ಎನ್ನಲಾಗಿದೆ.
ಪವಿತ್ರ ಕಾಲೇಜನ್ನು ಯಶವಂತಪುರಕ್ಕೆ ಸ್ಥಳಾಂತರಿಸಲು ಅನುಮತಿ ಕೋರಿ ಕಾಲೇಜಿನ ಮಾಲೀಕ ಎಚ್.ಎಂ. ಸತ್ಯ ನಾರಾಯಣರೆಡ್ಡಿಯವರು ಕಾನೂನು ಪ್ರಕಾರ ಹಣ ಕಟ್ಟಿ ಅರ್ಜಿ ಸಲ್ಲಿಸಿದ್ದರು. ಆದರೆ ತಪ್ಪು ವರದಿ ನೀಡಿ, ಲಂಚ ನೀಡಿದರೆ ಮಾತ್ರ ಮುಂದಿನ ಕೆಲಸ ಎಂದು ಮುನಿನಾಯಕ್ ಆಗ್ರಹಪಡಿಸಿದ್ದರು ಎನ್ನಲಾಗಿದೆ. ಟಿ.ಎಂ. ಅರ್ಜುನ್ ಎಂಬುವರ ದೂರಿನ ಮೇರೆಗೆ ಬಲೆ ಬೀಸಿದ ಲೋಕಾಯುಕ್ತ ಪೊಲೀಸರು, ಹಣ ತೆಗೆದುಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮುನಿನಾಯಕ್ ಅವರನ್ನು ಬೆನ್ನಟ್ಟಿ ಹಿಡಿದು ಹಾಕಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)