ಮೆಟ್ರೋ ಆಗಮದಿಂದ ಕಳೆಗುಂದಿದ ಸಿಎಂಎಚ್ ರಸ್ತೆ
ಬೆಂಗಳೂರು,ಆ.14: ಸಿಎಂಎಚ್ ರಸ್ತೆಯಲ್ಲಿ ಹಾದುಹೋಗುವ ಬೆಂಗಳೂರು ಮೈಟ್ರೋ ರೈಲು ಮಾರ್ಗಓಲ್ಡ್ ಮದ್ರಾಸ್ ರಸ್ತೆಗೆ ಸ್ಥಳಾಂತರಿಸಿ ಎಂಬ ಮನವಿಗೆ ಕಡೆಗೂ ಮಾನ್ಯತೆ ಸಿಗಲಿಲ್ಲ.ಈ ರಸ್ತೆಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಹೊಟ್ಟೆಹೊರೆಯುತ್ತಿದ್ದ ವರ್ತಕರು ಈಗ ಬೀದಿಗೆ ಬಿದ್ದಿದ್ದಾರೆ.
ಬೆಂಗಳೂರು ಮೈಟ್ರೊ ಮಾರ್ಗವನ್ನು ಬದಲಿಸಿ ಎಂದು ಕಳೆದ ಮೂರು ವರ್ಷಗಳಿಂದ ನಡೆಸಿದ ಅವಿರತ ಹೋರಾಟ ಮಣ್ಣುಗೂಡಿದೆ. ''ಕಳೆದ ಮೂರು ವರ್ಷಗಳಿಂದಲೂ ಸರ್ಕಾರದ ಬಳಿ ನಮ್ಮ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಕೆ.ಎನ್.ಶ್ರೀವತ್ಸರಿಂದ ಹಿಡಿದು ವಿ.ಮಧು ಮತ್ತು ಎನ್.ಶಿವಶೈಲನ್ ತನಕ ಮೈಟ್ರೋ ರೈಲು ಮಾರ್ಗವನ್ನು ಬದಲಾಯಿಸಿ ನಮ್ಮನ್ನು ಕಾಪಾಡಿ ಎಂದು ಬೇಡಿಕೊಂಡುದ್ದೇವೆ '' ಕಡೆಗು ನಮ್ಮ ಮನವಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗಲಿಲ್ಲ ಎನ್ನುತ್ತಾರೆ ಸಿಎಂಎಚ್ ರಸ್ತೆ ವರ್ತಕರ ಹಾಗೂ ವಾಣಿಜ್ಯ ಘಟಕಗಳ ಸಂಘದ ಇಮ್ತಿಯಾಜ್ ಅಹ್ಮದ್.
ಸಿಎಂಎಚ್ ರಸ್ತೆ ಮೂಲಕ ಹಾದುಹೋಗುವ ಮೈಟ್ರೊ ರೈಲು ಮಾರ್ಗಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡದ ಕಾರಣ ಯೋಜನೆ ಯಾವುದೇ ಅಭ್ಯಂತರವಿಲ್ಲದೆ ಮುಂದುವರಿಯುತ್ತಿದೆ.ಹಾಗಾಗಿ ಬಿಡುವಿಲ್ಲದ ವಾಣಿಜ್ಯ ಚಟುವಟಿಕೆಗಳ ತಾಣವಾದ ಇಂದಿರಾನಗರದ ಸಿಎಂಎಚ್ ರಸ್ತೆ ತನ್ನ ಹಳೆ ಖದರ್ ಕಳೆದುಕೊಂಡಿದೆ. ವ್ಯಾಪಾರಿಗಳಿಲ್ಲದೆ,ವಾಣಿಜ್ಯ ಮಳಿಗೆಗಳಿಲ್ಲದೆ ಸಿಎಂಎಚ್ ರಸ್ತೆ ಈಗ ಬಿಕೋ ಎನ್ನುತ್ತಿದೆ.
ಈ ರಸ್ತೆಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಸಣ್ಣ ವ್ಯಾಪಾರಿಗಳಂತೂ ಬಿಕಾರಿಗಳಾಗಿದ್ದಾರೆ ಎನ್ನುತ್ತಾರೆ ಗಣೇಶ್ ಮೆಡಿಕಲ್ಸ್ನ ರಾಮ್ಮೋಹನ್. ಇಂದಿರಾನಗರದ ಇತರ ಪ್ರದೇಶಗಳಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣಗಳು ತಲೆಯೆತ್ತುತ್ತಿವೆ. ಬಹಳಷ್ಟು ಗ್ರಾಹಕರು ಈ ರಸ್ತೆಗೆ ಹೊಂದಿಕೊಂಡಿದ್ದರು.ಮೆಟ್ರೊ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಲು ಸ್ಥಳ ಇಲ್ಲದಂತಾಗಿ ಜನ ಪರದಾಡುವಂತಾಗಿದೆ ಎಂದು ಅವರು ತಮ್ಮ ಅಳಲು ತೋಡಿಕೊಂಡರು. ಒಟ್ಟಿನಲ್ಲಿ ಮೈಟ್ರೋ ಕಾಮಗಾರಿ ಅಡಿಯಿಟ್ಟ ಕಾರಣ ಸಿಎಂಎಚ್ ರಸ್ತೆಯಲ್ಲಿ ವರ್ತಕರಲ್ಲಿ ಸ್ಮಶಾಣ ಮೌನ ಆವರಿಸಿದೆ. ಅವರು ತಮ್ಮ ಮುಂದಿನ ಭವಿಷ್ಯವನ್ನು ಕಂಡುಕೊಳ್ಳುವ ಯೋಜನೆಯಲ್ಲಿದ್ದಾರೆ.
(ದಟ್ಸ್ಕನ್ನಡ ವಾರ್ತೆ)