ಪೇಷಾವರದಲ್ಲಿ ಬಸ್ ಸ್ಫೋಟ; 13 ಸಾವು, 11ಜನ ಗಾಯ
ಪೇಷಾವರ, ಆ. 12 : ನಗರದ ಹೊರವಲಯದ ಸೇತುವೆ ಕೆಳಗೆ ಶಕ್ತಿಶಾಲಿ ಬಾಂಬ್ ಇರಿಸಿ ವಾಯುಯಾನ ಇಲಾಖೆಗೆ ಸೇರಿದ ಬಸ್ಸೊಂದನ್ನು ಸ್ಫೋಟಗೊಳಿಸಿದ್ದರಿಂದ 13 ಜನ ಮೃತಪಟ್ಟಿದ್ದಾರೆ. 11 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಮೃತಪಟ್ಟಿರುವವರ ದೇಹದ ಅನೇಕ ಭಾಗಗಳು ಚೆಲ್ಲಾಪಿಲ್ಲಿಯಾಗಿವೆ. ಬಸ್ ಸಂಪೂರ್ಣವಾಗಿ ರಕ್ತಸಿಕ್ತವಾದ ಹೃದಯ ವಿದ್ರಾವಕಕಾರಿ ಘಟನೆ ಮಂಗಳವಾರ ನಡೆದಿದೆ.
ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ನಗರದ ಹೊರವಲಯದ ಸೇತುವೆಯ ಕೆಳಗೆ ಶಕ್ತಿಶಾಲಿ ಬಾಂಬ್ ಇರಿಸಲಾಗಿತ್ತು. ವಾಯುಯಾನ ಇಲಾಖೆಗೆ ಸೇರಿದ ಬಸ್ ಬರುವ ವೇಳೆಯಲ್ಲಿ ಈ ಸ್ಫೋಟವನ್ನು ನಡೆಸಲಾಗಿದೆ. ಸ್ಫೋಟದ ಕೃತ್ಯಕ್ಕೆ ಸುಧಾರಿತ ಸ್ಫೋಟಕ ಸಾಮಗ್ರಿಗಳನ್ನು ಬಳಸಲಾಗಿದೆ. ಟೈಮರ್ ಮೂಲಕ ಬಾಂಬ್ ಬಸ್ ಸ್ಫೋಟಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಾಯಗೊಂಡವನ್ನು ಪೇಷಾವರ್ ದ ಲೇಡಿ ರೀಡಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡಿರುವ 11 ಮಂದಿಯ ಸ್ಥಿತಿಯೂ ಚಿಂತಾಜನಕವಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ತಾಲಿಬಾನ್ ಉಗ್ರರ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. ತಾಲಿಬಾನ್ ಉಗ್ರರು ಅಟ್ಟಹಾಸಕ್ಕೆ ಕಳೆದ ಒಂದು ವರ್ಷದಲ್ಲಿ ಸಾವಿರಕ್ಕೂ ಅಧಿಕ ಅಮಾಯಕ ಜನರು ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)