ಜಮ್ಮು ಮತ್ತೆ ಹಿಂಸಾಚಾರ, ನಿಷೇಧಾಜ್ಞೆ, 5 ಸಾವು
ಜಮ್ಮು, ಆ. 12 : ಅಮರನಾಥ ಸಮಸ್ಯೆಯ ದಳ್ಳುರಿ ಮುಗಿಲು ಮುಟ್ಟಿದೆ. ಮಂಗಳವಾರವೂ ಬಂಡೀಪೂರ್ ಮತ್ತು ಲಾಸ್ ಜಾನ್ ಪ್ರದೇಶಗಳಲ್ಲಿ ಹಿಂಸಾಚಾರ ಮುಂದುವರೆದಿದ್ದು, ಪೊಲೀಸರ ನಡೆಸಿದ ಗೋಲಿಬಾರ್ ನಲ್ಲಿ ಐವರು ಜನರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಐದು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರದ ಕಣಿವೆ ಪ್ರದೇಶ ಕಿಸ್ತವಾರ್ ದಲ್ಲಿಯೂ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ.
ಅಮರನಾಥ ಭೂವಿವಾದವನ್ನು ಬಗೆಹರಿಸುವ ಸಲುವಾಗಿ ಕೇಂದ್ರ ಸರ್ಕಾರ ರಾಜಧಾನಿಯಲ್ಲಿ ಸರ್ವಪಕ್ಷಗಳ ಸಭೆ ಕರೆದು ಸಭೆ ನಡೆಸುತ್ತಿದ್ದರೆ, ಇತ್ತ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಮುಗಿಲು ಮುಟ್ಟಿದೆ. ನಿಷೇಧಾಜ್ಞೆ ಪ್ರದೇಶದಲ್ಲಿ ಪ್ರತಿಭಟನೆ ನಡೆಬಾರದು ಎಂದು ನಿಯಮವಿದ್ದರೂ ಯಾವುದನ್ನೂ ಲೆಕ್ಕಿಸದೇ ಪ್ರತಿಭಟನೆಯಲ್ಲಿ ನಿರತರಾಗಿರುವ ಪ್ರತಿಭಟನಾಕಾರರನ್ನು ಚದುರಿಸಲು ಅನಿವಾರ್ಯವಾಗಿ ಗೋಲಿಬಾರ್ ನಡೆಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಭಟನಾಕಾರ ಮೇಲೆ ಗುಂಡು ಹಾರಿಸಲಾಗಿದೆ. ಭಾರಿ ಕಟ್ಟೆಚ್ಚರದ ನಡುವೆಯೂ ಅಸ್ಕೋರಾ, ಪಲ್ಹಾಮ್ ಪ್ರದೇಶಗಳ ಕೆಲ ಕಡೆ ತ್ವೇಷಮಯ ವಾತಾವರಣ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಉದಮ್ ಪುರ, ಜಮ್ಮು, ಕಿಸ್ತವಾರ್, ಸಾಂಬಾ ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ.
ಈ ಮಧ್ಯೆ ಪ್ರತಿಭಟನಾ ನಿರತ ಪ್ರತ್ಯೇಕತಾವಾದಿ ಹುರಿಯತ್ ಮುಖಂಡ ಶೇಖ್ ಅಬ್ಧುಲ್ ಅಜೀಜ್ ನಡೆಸುತ್ತಿದ್ದ ಪ್ರತಿಭಟನೆಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಶೇಖ್ ಅಜೀಜ್ ಶ್ರೀನಗರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)
ಅಮರನಾಥ ದೇಗುಲ ವಿವಾದ ಮತ್ತೆ ಸರ್ವಪಕ್ಷ ಸಭೆ