ಕರವೇದಾಳಿಗೆ ದಾಳಿಗೆ ಸಿಕ್ಕ ವೀಕೆಂಡ್ ಗಾಂಜಾ ಪಾರ್ಟಿ
ಬೆಂಗಳೂರು, ಆ. 10 : ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ನೇತೃತ್ವದಲ್ಲಿ ಶನಿವಾರ ಮಧ್ಯರಾತ್ರಿ ನಗರದ ಹೊರವಲಯದ ತಾವರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಮಂಚಿನಬೆಲೆ ಡ್ಯಾಂ ಬಳಿ ರೇವ್ ಪಾರ್ಟಿ ಮಾಡುತ್ತಿದ್ದ ಗುಂಪಿನ ಮೇಲೆ ದಿಢೀರ್ ದಾಳಿನಡೆಸಿ ಅಪಾರ ಪ್ರಮಾಣದ (ಗಾಂಜಾ, ಅಫೀಮು)ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ತಾವರೆಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅನೇಕ ವರ್ಷಗಳಿಂದ ರೇವ್ ಪಾರ್ಟಿ ವೀಕೆಂಡ್ ಗಳಲ್ಲಿ ನಡೆಯುತ್ತಿತ್ತು. ಅಗತ್ಯ ಮಾಹಿತಿ ಸಂಗ್ರಹಿಸಿದ ಕಾರ್ಯಧ್ಯಕ್ಷ ಶಿವರಾಮೇಗೌಡ ನೇತೃತ್ವದ 25 ಜನರ ರಕ್ಷಣಾ ವೇದಿಕೆಯ ಕಾರ್ಯಕರ್ತರು ದಿಢೀರ್ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದ ಹಲವರು ಪರಾರಿಯಾದರು. ಕರವೇ ಸಹಾಯದಿಂದ ಮಾದಕ ದ್ರವ್ಯಗಳ ನಿಶೆಯಲ್ಲಿದ್ದ 30 ಜನರನ್ನು ವಶಕ್ಕೆ ತಗೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಮಾರು 150 ಯುವಕ- ಯವತಿಯರು ವಿಕೆಂಡ್ಔಟಿಂಗ್ ನೆಪದಲ್ಲಿ ಶನಿವಾರ ಮಧ್ಯರಾತ್ರಿ ರೇವಾ ಎಂಬ ಹೆಸರಿನ ಪಾರ್ಟಿ ನಡೆಸುತ್ತಿದ್ದರು.
ತಾವರೆಕೆರೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ಈ ಮೂಲಕ ಮಾದಕವಸ್ತುಗಳ ದೊಡ್ಡ ಜಾಲ ನಗರದಲ್ಲಿ ಬೇರುಬಿಟ್ಟಿದೆ ಎನ್ನಲಾಗಿದೆ. ಮಾದಕವಸ್ತುಗಳ ಸರಬರಾಜು ಮಾಡುವ ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)