'ಗುಡಿ'ಯಿಂದ ಕರಕುಶಲ ವಸ್ತುಗಳ ಪ್ರದರ್ಶನ
ಬೆಂಗಳೂರು, ಆ.9: ಕಲಾವಿದರ ಮತ್ತು ಕಲಾಸಕ್ತರ ನಡುವಿನ ಸಂಪರ್ಕ ಸೇತುವೆಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ 'ಗುಡಿ' ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತನ್ನದೇ ಆದ ಸ್ವಂತ ಕಲಾಕೃತಿ ಮತ್ತು ಗೃಹಪಯೋಗಿ ವಸ್ತುಗಳನ್ನು ತಯಾರಿಸಲು ನಿರ್ಧರಿಸಿದೆ. ಕಲಾಕೃತಿಗಳ ಪ್ರದರ್ಶನವನ್ನು ಶನಿವಾರ ಸಾಹಿತಿ ಯು. ಆರ್. ಅನಂತ ಮೂರ್ತಿ ಉದ್ಘಾಟಿಸಿದರು.
ಒಂದು ಸಮುದಾಯಕ್ಕೆ, ಮುಖ್ಯವಾಗಿ ರೈತಾಪಿ ಜನರನ್ನು ಕೇಂದ್ರವನ್ನಾಗಿರಿಸಿಕೊಂಡು ಈಗಾಗಲೇ ಕಳೆದ ಮೂರು ತಿಂಗಳಿಂದ ಬಹುಮುಖ ಪ್ರತಿಭೆಯ ಇಕ್ಬಾಲ್ ಅಹಮದ್ ಅವರ ಪರಿಕಲ್ಪನೆ, ವಿನ್ಯಾಸ ಮತ್ತು ಮಾರ್ಗದರ್ಶನದಂತೆ ಶಿಕಾರಿಪುರದ ಕೆಲ ರೈತಾಪಿ ಗೆಳೆಯರು ಅದ್ಭುತ ಎನ್ನಬಹುದಾದ ಲೋಹದ ಹೂ, ಗಿಡಗಳನ್ನು ನಿರ್ಮಿಸಿದ್ದಾರೆ. ಗುಡಿ ಕೈಗಾರಿಕೆಯನ್ನು ಕಲಾತ್ಮಕವಾಗಿ ಬೆಳೆಸುವ ಯೋಜನೆ 'ಗುಡಿ'ಯದ್ದಾಗಿದೆ. ರೈತರು ತಮ್ಮ ಬಿಡುವಿನ ವೇಳೆಯಲ್ಲಿ ಮಾಡಬಹುದಾದ ಕಲಾಕೃತಿ ಅಥವಾ ಗೃಹಪಯೋಗಿ ವಸ್ತುಗಳಿಂದ ಅವರ ಆರ್ಥಿಕ ಸ್ಥಿತಿ ಉತ್ತಮಗೊಂಡು, ಸಾಮಾಜಿಕ ಸ್ಥಾನಮಾನಗಳು ಹೆಚ್ಚುವಂತ ಮಾಡುವುದೇ ಗುಡಿಯ ಉದ್ದೇಶ. ಆಗಸ್ಟ್ 9ರಂದು ಲೋಹದ ಹೂ, ಗಿಡಗಳ ಪ್ರದರ್ಶನವನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ
ಎಂದೂ ಬಾಡದ ಹೂಗಳು ಗುಡಿಯಲ್ಲಿ ಅರಳಿ ನಿಂತಿವೆ. ತಾಮ್ರ ಮತ್ತು ಹಿತ್ತಾಳೆಯ ಹಾಳೆಗಳಿಂದ ಮಾಡಲ್ಪಟ್ಟಿರುವ ಈ ಹೂಗಳು ತಮ್ಮ ಸಹಜ ಗಡಸುತನವನ್ನು ಮರೆಮಾಚಿ, ಜೀವ ತುಂಬಿಕೊಂಡು ನಿಜದ ಹೂಗಳು ನಾಚುವಂತೆ ಮೂಡಿಬಂದಿವೆ. ನೈದಿಲೆ, ಕಮಲ, ದಾಸವಾಳ ಮುಂತಾದ ಹೂಗಳು ನಳನಳಿಸುತ್ತ ನಿಂತಿರುವದ್ದನ್ನು ನೋಡುವುದೇ ಒಂದು ಸೊಗಸು. ಈ ಹೂಗಳು ಸಹಜಾಕೃತಿಯಿಂದ ಹಿಡಿದು ಅದರ ಐದಾರು ಪಟ್ಟು ದೊಡ್ಡ ಗಾತ್ರದಲ್ಲಿವೆ. ಇವು ನಿಮ್ಮ ಮನೆ / ಕಛೇರಿಯ ಒಳಾಂಗಣ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ.
(ದಟ್ಸ್ಕನ್ನಡ ಸಭೆ-ಸಮಾರಂಭ)