ಬಿಜೆಪಿ ಮೇಲೆ ದೇವೇಗೌಡರ ಟೀಕಾಸ್ತ್ರಗಳ ಸುರಿಮಳೆ
ಬೆಂಗಳೂರು,ಆ.9: ಅಮರನಾಥ ದೇವಾಲಯದ ಭೂ ವಿವಾದವನ್ನು ಭಾರತೀಯ ಜನತಾ ಪಕ್ಷ ರಾಜಕೀಕರಣಗೊಳಿಸುತ್ತಿದೆ ಎಂದು ಜೆಡಿಎಸ್ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಗಂಭೀರವಾಗಿ ಆರೋಪಿಸಿದ್ದಾರೆ.
ಭಾನುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬಿಜೆಪಿ ಹಿಂದೆ ರಾಮಜನ್ಮ ಭೂಮಿ, ರಾಮಸೇತು, ಬಾಬಾ ಬುಡನ್ ಗಿರಿಯನ್ನು ಚುನಾವಣಾ ದಾಳವಾಗಿಸಿಕೊಂಡು ಹಲವಾರು ಸಲ ಅಧಿಕಾರದ ಗದ್ದುಗೆಯನ್ನು ಏರಿದೆ. ಈಗ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಅಮರನಾಥ ದೇವಾಲಯದ ಭೂವಿವಾದವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು. ಜಮ್ಮು ಮತ್ತು ಕಾಶ್ಮೀರ ಸರ್ಕಾರ ದೇವಾಲಯಕ್ಕೆ ನೀಡಿದ್ದ ಭೂಮಿಯನ್ನು ಹಿಂಪಡೆದಿಲ್ಲ. ಅದರ ಆದೇಶವನ್ನು ಮಾತ್ರ ಹಿಂಪಡೆದಿದೆ. ಈಗಲು ಅಲ್ಲಿನ ಹಿಂದು ಹಾಗೂ ಮುಸ್ಲಿಂರು ಭೂಮಿಯನ್ನು ಬಳಸುತ್ತಿದ್ದಾರೆ. ಆದರೆ ಬಿಜೆಪಿ ಈ ವಿಚಾರದಲ್ಲಿ ಅನಾವಶ್ಯಕ ಮೂಗು ತೂರಿಸಿ ರಾಜಕೀಯವಾಗಿ ಹೊಲಸೆಬ್ಬಿಸುತ್ತಿದೆ ಎಂದರು.
ಪರಿಸ್ಥಿತಿ ಅವಲೋಕಿಸಲು ಕೇಂದ್ರದ ಸರ್ವಪಕ್ಷ ನಿಯೋಗ ಜಮ್ಮುಗೆ ತೆರಳಿತ್ತಿರುವುದನ್ನು ಬಿಜೆಪಿ ತಿರಸ್ಕರಿಸಿ ತಮ್ಮದು ಕೋಮುವಾದಿ ಪಕ್ಷ ಎಂಬುದನ್ನು ಸಾಬೀತು ಪಡಿಸಿದೆ. ದೇವರು ಹಾಗೂ ಧರ್ಮದ ಹೆಸರಿನಲ್ಲಿ ಜನರನ್ನು ಭಾವೋದ್ವೇಗಕ್ಕೆ ಸಿಲುಕಿಸಿ ಅವರಲ್ಲಿ ಘರ್ಷಣೆ ಉಂಟುಮಾಡಿ ಪರಿಸ್ಥಿತಿಯ ಲಾಭ ಪಡೆಯುವುದರಲ್ಲಿ ಬಿಜೆಪಿ ಪಕ್ಷದ್ದು ಎತ್ತಿದ ಕೈ. ಮುಂದಿನ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಉದ್ದೇಶವಾಗಿಟ್ಟುಕೊಂಡು ಅಮರನಾಥ ಭೂ ವಿವಾದವನ್ನು ದೊಡ್ಡದು ಮಾಡುತ್ತಿದೆ. ಅಮರನಾಥದ ಶಿವಲಿಂಗವನ್ನು ಮೊದಲು ಪತ್ತೆ ಹಚ್ಚಿದ್ದು ಮುಸ್ಲಿಂರು. ಅಮರನಾಥ ಹಿಂದು-ಮುಸ್ಲಿಂರ ಭಾವೈಕ್ಯತೆಯ ತಾಣ. ಇಂತಹ ಪವಿತ್ರವಾದ ಸ್ಥಳದಲ್ಲಿ ಬಿಜೆಪಿ ಕೋಮುವಾದದ ಬೀಜ ಬಿತ್ತುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್, ಜೆಡಿಎಸ್ ವಕ್ತಾರ ವೈಎಸ್ವಿ ದತ್ತ್ತ, ಪದ್ಮಾವತಿ ಗಂಗಾಧರ ಗೌಡ, ಅರವಿಂದ ಎಂ.ದಳವಾಯಿ ಮುಂತಾದವರು ಉಪಸ್ಥಿತರಿದ್ದರು.
(ದಟ್ಸ್ಕನ್ನಡ ವಾರ್ತೆ)